ಬಿಜೆಪಿ ಪ್ರತಿಷ್ಠೆ, ಜೆಡಿಎಸ್ ಅಸ್ತಿತ್ವ ಕಾಂಗ್ರೆಸ್ ಗೌರವ
ಬೆಂಗಳೂರು, ಡಿ. 29 : ಮಂಗಳವಾರ ಎಂಟು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ಪ್ರತಿಷ್ಠೆ ಪ್ರಶ್ನೆಯಾಗಿದ್ದರೆ, ಸೋತು ಸುಣ್ಣವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ. ಉಳಿದಂತೆ ಜೆಡಿಎಸ್ ಪಕ್ಷ ಗೆಲ್ಲಲೆಬೇಕು ಎಂಬ ಹಠದಿಂದ ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಅಖಾಡಕ್ಕೆ ಇಳಿಸಿರುವುದು ಕೂಡ ಸ್ಪರ್ಧೆಯ ಜೊತೆಗೆ ಫಲಿತಾಂಶ ಭಾರಿ ರೋಚಕತೆ ಪಡೆದುಕೊಂಡು ಜನಸಾಮಾನ್ಯರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಈ ಚುನಾವಣೆ ಫಲಿತಾಂಶದಿಂದ ಅಷ್ಟೇನೂ ಗಮನಾರ್ಹ ಬದಲಾವಣೆ ಕಂಡು ಬರದಿದ್ದರೂ ಅಪರೇಷನ್ ಕಮಲದ ಮೂಲಕ ಬಿಜೆಪಿ ಪಕ್ಷಾಂತರ ಮಾಡಿರುವ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಆನಂದ ಅಸ್ನೋಟಿಕರ್, ಶಿವನಗೌಡ ನಾಯಕ ಹಾಗೂ ಜೆ ನರಸಿಂಹಸ್ವಾಮಿ ಅವರು ಗೆಲ್ಲಲೆಬೇಕಾದ ಅನಿವಾರ್ಯತೆ ಇದೆ. ಚುನಾವಣೆ ನಂತರ ವರದಿಗಳ ಪ್ರಕಾರ ಶಿವನಗೌಡ ನಾಯಕ ಅವರನ್ನು ಬಿಟ್ಟರೆ ಉಳಿದವರ ಗೆಲುವು ಸರಳವಿದೆ ಎನ್ನುವ ಅಂಶ ಮತದಾನದ ಮೂಲಕ ಗೊತ್ತಾಗಿದೆ.
ಉಳಿದಂತೆ ಜೆಡಿಎಸ್ ಕನಿಷ್ಠ ಎರಡು ಅಂದರೆ ಮದ್ದೂರು ಕಲ್ಪನಾ ಸಿದ್ದರಾಜು ಅವರು ಅನುಕಂಪದ ಅಧಾರದ ಮೇಲೆ ಜಯಭೇರಿ ಭಾರಿಸಿದರೆ, ಮಧುಗಿರಿಯಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ವರ್ಚಸ್ಸಿನಿಂದ ಅನಿತಾ ಕುಮಾರಸ್ವಾಮಿ ವಿಜಯಮಾಲೆ ಧರಿಸುವ ಎಲ್ಲ ಲಕ್ಷಣಗಳು ಕಂಡು ಬಂದಿವೆ. ತುರುವೇಕೆರೆಯಲ್ಲಿ ಮಾತ್ರ ತ್ರಿಕೋನ ಸ್ಪರ್ಧೆಯಿದ್ದು, ಕೂದಲೆಳೆ ಅಂತರದಲ್ಲಿ ಜಯ ಈ ಮೂವರಲ್ಲಿ ಯಾರಿಗಾದರೂ ದೊರೆಯಬಹುದಾಗಿದೆ. ಜಗ್ಗೇಶ್ ಮಾಡಿಕೊಂಡ ಅವಾಂತರದಿಂದ ಕಾಂಗ್ರೆಸ್ ಮತ್ತು ಬಿಜೆಪಿ ಗೆ ಬಾರಿ ಪೆಟ್ಟು ಬೀಳುವ ಸಾಧ್ಯತೆಗಳಿದ್ದು, ಕೊನೆ ಗಳಿಗೆಯಲ್ಲಿ ಜೆಡಿಎಸ್ ಎಂ ಟಿ ಕೃಷ್ಣಪ್ಪ ಇಬ್ಬರ ನಡುವಿನ ಜಗಳದಲ್ಲಿ ಮೂರನೇಯನಿಗೆ ಲಾಭವಾದರೂ ಅಚ್ಚರಿ ಪಡುವ ಸಂಗತಿಯೇನಲ್ಲ. ಒಟ್ಟು ಎಂಟು ಮತಕ್ಷೇತ್ರದಲ್ಲಿ 73 ಅಭ್ಯರ್ಥಿಗಳು ಕಣದಲ್ಲಿದ್ದರು. 13.69 ಲಕ್ಷ ಮತದಾರರು ತಮ್ಮ ಮತವನ್ನು ಚಲಾಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಏಪ್ರಿಲ್ ಮೇ ನಲ್ಲಿ ಲೋಕಸಭೆ ಚುನಾವಣೆ
ಮರುಚುನಾವಣೆಯಲ್ಲಿ ಮತ್ತೆ ಬಿಜೆಪಿ ಪ್ರಾಬಲ್ಯ ?












Click it and Unblock the Notifications