ತುರುವೇಕೆರೆಯಲ್ಲಿ ಜೆಡಿಎಸ್ ಕಾರ್ಯಕರ್ತರ ದಾಂಧಲೆ
ಬೆಂಗಳೂರು, ಡಿ. 27 : ಚಿತ್ರನಟ ಜಗ್ಗೇಶ್ ರಾಜೀನಾಮೆಯಿಂದ ತೆರವಾಗಿದ್ದ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮತದಾನ ನಡೆಯುವ ಸ್ಥಳದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ ಬೆಂಬಲಿಗರು ಮತಪಟ್ಟಿಯಲ್ಲಿ ಗೊಂದಲವಿದೆ ಎಂದು ಆರೋಪಿಸಿ ಚುನಾವಣಾಧಿಕಾರಿ ಕಚೇರಿ ಮುತ್ತಿಗೆ ಹಾಕಿ ದಾಂಧಲೆ ನಡೆಸಿದರು.
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ನೀಡಲಾಗಿರುವ ಮತದಾರರ ಪಟ್ಟಿಗಳು ಬೇರೆಬೇರೆಯಾಗಿದ್ದು ಗೊಂದಲದಿಂದ ಕೂಡಿವೆ. ಚುನಾವಣಾಧಿಕಾರಿ ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇಲ್ಲಿ ಮತದಾನವನ್ನು ಮುಂದೂಡಬೇಕೆಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಧರಣಿ ನಡೆಸಿದರು.
ತೀವ್ರ ಆಕ್ರೋಶಗೊಂಡಿದ್ದ ಕಾರ್ಯಕರ್ತರು ಚುನಾವಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಕುರ್ಚಿ ಮೇಜುಗಳನ್ನು ಧ್ವಂಸ ಮಾಡಿದರು. ಪೊಲೀಸ್ ಅಧಿಕಾರಿಯನ್ನು ತಳ್ಳಾಡಿದರು. ಭದ್ರತಾ ಸಿಬ್ಬಂದಿ ಎಷ್ಟೇ ವಿನಂತ್ರಿಸಿದರೂ ಕಾರ್ಯಕರ್ತರ ಆಕ್ರೋಶ ಶಮನವಾಗಲಿಲ್ಲ.
ಜೆಡಿಎಸ್ ನಿಂದ ಎಂಟಿ ಕೃಷ್ಣಪ್ಪ, ಕಾಂಗ್ರೆಸ್ ನಿಂದ ಎಚ್.ಬಿ. ನಂಜೇಗೌಡ ಮತ್ತು ಬಿಜೆಪಿಯಿಂದ ಲಕ್ಷ್ಮೀನಾರಾಯಣ ಕಣಕ್ಕಿಳಿದಿದ್ದಾರೆ. 2004ರಲ್ಲಿ ಕೃಷ್ಣಪ್ಪ ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2008ರಲ್ಲಿ ನಡೆದ ಚುನಾವಣೆಯಲ್ಲಿ ಜಗ್ಗೇಶ್ ಜನರ ಅನುಕಂಪದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷದಿಂದ ಜಯಗಳಿಸಿದ್ದರು. ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುವ ನಿರೀಕ್ಷೆಯಿದೆ.
ಬೆಳಿಗ್ಗೆಯಿಂದ ಶಾಂತರೀತಿಯಲ್ಲಿ ಸಾಗಿದ್ದ ಮತದಾನ ಮಧ್ಯಾಹ್ನವಾಗುತ್ತಿದ್ದಂತೆ ಕಾವೇರುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿ ಒಟ್ಟಾರೆಯಾಗಿ ಇಲ್ಲಿಯವರೆಗೆ ಕೇವಲ ಶೇ. 20ರಷ್ಟು ಮಾತ್ರ ಮತಚಲಾವಣೆ ಆಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications