ಬೆಂಗಳೂರಿಗೆ ಎನ್ಎಸ್ ಜಿ ಘಟಕ ಇಲ್ಲ
ನವದೆಹಲಿ, ಡಿ. 23 : ಕಳೆದ ತಿಂಗಳು ನಡೆದ ಮುಂಬೈ ದಾಳಿಯಿಂದ ಎಚ್ಚತ್ತುಕೊಂಡಿರುವ ಕೇಂದ್ರ ಸರ್ಕಾರ ಹೈದರಾಬಾದ್, ಕೊಲ್ಕತ್ತಾ, ಚೆನ್ನೈ ಹಾಗೂ ಮುಂಬೈ ಯಲ್ಲಿ ಶಸ್ತ್ರಸಜ್ಜಿತ ಅತ್ಯಾಧುನಿಕವಾಗಿರುವ ರಾಷ್ಟ್ರೀಯ ಭದ್ರತಾ ಪಡೆಯನ್ನು ಸ್ಥಾಪಿಸಲು ನಿರ್ಧರಿಸಿದೆ. ಆದರೆ ಕರ್ನಾಟಕ ಸರ್ಕಾರ ಕೂಡ ಬೆಂಗಳೂರಿನಲ್ಲಿ ಎನ್ಎಸ್ ಜಿ ಘಟಕ ಬೇಕು ಎಂದು ಕೇಂದ್ರ ಸರ್ಕಾರ ಮೇಲೆ ತೀವ್ರ ಒತ್ತಡ ಹೇರಿತ್ತು, ಆದರೆ ಅದು ಫಲಕಾರಿಯಾಗಿಲ್ಲ.
ಎನ್ ಎಸ್ ಜಿ ಮುಖ್ಯಸ್ಥ ಜೆ ಕೆ ದತ್ತ ಹಾಗೂ ಕೇಂದ್ರ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿ ಮಧುಕರ್ ಗುಪ್ತಾ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು, ಬೋಪಾಲ್, ಗೌಹಾತಿ ಮತ್ತು ಅಹಮದಾಬಾದ್ ನಲ್ಲಿ ಎನ್ ಎಸ್ ಜಿ ಘಟಕ ಸ್ಫಾಪಿಸಲು ಪರಿಗಣಿಸಲಾಯಿತಾದರೂ ಕೊನೆಯಲ್ಲಿ ಅವುಗಳನ್ನು ಕೈಬಿಡಲಾಗಿದೆ. ಸದ್ಯಕ್ಕೆ ಮುಂಬೈ, ಚೆನ್ನೈ, ಹೈದರಾಬಾದ್ ಹಾಗೂ ಮುಂಬೈಯಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸದ್ಯ ಹರಿಯಾಣದ ಮನೆಸರ್ ಎಂಬಲ್ಲಿ ಮಾತ್ರ ದೇಶದ ಶಸ್ತ್ರಸಜ್ಜಿತ ಎನ್ಎಸ್ ಜಿ ಘಟಕವಿದೆ. ಆದರೆ ಕಳೆದು ತಿಂಗಳು ಮುಂಬೈ ಭಯೋತ್ಪಾದನೆ ವೇಳೆಯಲ್ಲಿ ಅವಶ್ಯಕ ಎನಿಸಿದ್ದ ಕಮಾಂಡೋ ಕಾರ್ಯಾಚರಣೆ ತುಂಬ ತಡವಾಗಿ ಮುಂಬೈ ಆಗಮಿಸಿದ್ದರಿಂದ ಅನೇಕ ಅಮಾಯಕರು ಸಾವನ್ನಪ್ಪಿದ್ದರು. ಇದರಿಂದ ಸರ್ಕಾರದ ವಿರುದ್ಧ ಸಾರ್ವಜನಿಕರು ವ್ಯಾಪಕ ಟೀಕೆಗಳ ಸುರಿಮಳೆ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಎನ್ ಎಸ್ ಜಿ ಘಟಕವನ್ನು ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಎನ್ ಎಸ್ ಜಿ ಘಟಕವೊಂದನ್ನು ಬೆಂಗಳೂರಿನಲ್ಲಿಯೀ ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತು. ಬೆಂಗಳೂರು ಸಾಫ್ಟ್ ವೇರ್ ಕಂಪನಿಗಳ ಸ್ವರ್ಗವಾಗಿದ್ದು, ದೇಶ ವಿದೇಶದ ಅನೇಕ ಪ್ರತಿಷ್ಠಿತ ಕಂಪನಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಎನ್ ಎಸ್ ಜಿ ಘಟಕದ ಅವಶ್ಯಕತೆ ಇತ್ತು. ಕರ್ನಾಟಕದ ಬಿಜೆಪಿ ಸರ್ಕಾರ ಕೇಂದ್ರಕ್ಕೆ ಈ ಬಗ್ಗೆ ಭಾರಿ ಒತ್ತಡವನ್ನೂ ಹಾಕಿತ್ತು. ಆದರೆ ಕೇಂದ್ರ ಮಾತ್ರ ಬೆಂಗಳೂರಿಗೆ ಎನ್ ಎಸ್ ಜಿ ಘಟಕವನ್ನು ನೀಡದೆ ನಿರಾಶೆ ಮೂಡಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications