ಸೇನಾ ಪಡೆ ಮುಖ್ಯಸ್ಥ ಸಿಯಾಚಿನ್ ಗೆ ದೌಡು
ನವದೆಹಲಿ, ಡಿ, 23 : ಪಾಕಿಸ್ತಾನದ ವಿರುದ್ಧ ಸಮರ ಸಾರಲು ಭಾರತ ತನ್ನ ಯುದ್ಧ ವಿಮಾನಗಳನ್ನು ಗಡಿ ಪ್ರದೇಶದಲ್ಲಿ ಸಜ್ಜುಗೊಳಿಸಿದ ಬೆನ್ನಲ್ಲೇ ಪರಿಸ್ಥಿತಿ ಅವಲೋಕಿಸಲು ಕೇಂದ್ರ ಸರ್ಕಾರ ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಜನರಲ್ ದೀಪಕ್ ಕಪೂರ್ ಅವರನ್ನು ಜಮ್ಮು ಕಾಶ್ಮೀರದ ಗಡಿ ಪ್ರದೇಶದವಾದ ಸಿಯಾಚಿನ್ ಪ್ರದೇಶಕ್ಕೆ ಕಳುಹಿಸಿ ಕೊಟ್ಟಿದೆ.
ಇಂದು ಬೆಳಗ್ಗೆ ಸಿಯಾಚಿನ್ ತಲುಪಿರುವ ಸೇನಾ ಮುಖ್ಯಸ್ಥ ದೀಪಕ್ ಕಪೂರ್, ಅಲ್ಲಿನ ಸೇನಾ ಕಮಾಂಡೋಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸತೊಡಗಿದ್ದಾರೆ. ಸದ್ಯ ಗಡಿ ಪ್ರದೇಶವಾಗಿರುವ ಸಿಯಾಚಿನ್ ನಲ್ಲಿರುವ ವಾತಾವರಣ, ಸೇನಾ ವಿವರ ಸೇರಿದಂತೆ ಮತ್ತಿತರ ಮಹತ್ವದ ಮಾಹಿತಿಗಳನ್ನು ಕಲೆ ಹಾಕಲಿರುವ ಕಪೂರ್ ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಾಗತಿಕ ಗುಪ್ತಚರ ವರದಿಗಳ ಪ್ರಕಾರ, ಭಾರತ ಪಾಕ್ ವಿರುದ್ಧ ಸಮರ ಸಾರಲು ತುದಿಗಾಲ ಮೇಲೆ ನಿಂತಿದೆ. ಯುದ್ಧ ವಿಮಾನ ಸೇರಿದಂತೆ ಸಶಸ್ತ್ರಪಡೆಯನ್ನು ಗಡಿ ಪ್ರದೇಶದಲ್ಲಿ ಈಗಾಗಲೇ ಠಿಕಾಣಿ ಹೂಡಿದೆ. ಸರ್ಕಾರದ ಆದೇಶ ಹೊರಬೀಳುವದು ಮಾತ್ರ ಬಾಕಿ ಇದ್ದು, ಭಾರತ ಪಾಕಿಸ್ತಾನದ ಮೇಲೆ ಯಾವ ಕ್ಷಣದಲ್ಲಾದರೂ ಯುದ್ಧ ಸಾರಬಹುದು ಎಂದು ಹೇಳಿತ್ತು.
ಭಾರತಕ್ಕೆ ಸೆಡ್ಡು ಹೊಡಿರುವ ಪಾಕ್, ನಾವು ಕೂಡಾ ಯುದ್ಧಕ್ಕೆ ರೆಡಿಯಾಗಿದ್ದೇವೆ ಎಂದು ಹೇಳಿದೆ. ಇದರ ಪರಿಣಾಮವಾಗಿ ಪಾಕ್ ಸೇನಾ ಪಡೆಯ ಮುಖ್ಯಸ್ಥ ಅಶ್ಫಕ್ ಕಯಾನಿ ಸೋಮವಾರ ಪಾಕ್ ಅಧ್ಯಕ್ಷ ಆಸೀಫ್ ಅಲೀ ಜರ್ದಾರಿ ಅವರನ್ನು ಭೇಟಿ ಮಾಡಿ ಪಾಕ್ ಸರ್ಕಾರಕ್ಕೆ ಆಭಯ ನೀಡಿದೆ. ಮುಂಬೈ ದಾಳಿಯಲ್ಲಿ ಪಾಕ್ ನ ಸ್ಪಷ್ಟ ಕೈವಾಡವಿದ್ದರೂ ಅದನ್ನು ಪಾಕ್ ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ. ಕಸಬ್ ಪಾಕ್ ಮೂಲದವನು ತನಿಖೆಯಿಂದ ತಿಳಿದು ಬಂದಿತ್ತು.
(ದಟ್ಸ್ ಕನ್ನಡ ವಾರ್ತೆ)
ಯುದ್ಧಕ್ಕೆ ನಾವು ರೆಡಿಯಾಗಿದ್ದೇವೆ : ಪಾಕಿಸ್ತಾನ











Click it and Unblock the Notifications