ಕಸಬ್ ಕೇಸ್ ವಕೀಲರಿಗೆ ಠಾಕ್ರೆ ಎಚ್ಚರಿಕೆ
ಮುಂಬೈ, ಡಿ. 17 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನನ್ನು ಯಾವುದೇ ವಿಚಾರಣೆ ನಡೆಸದೆ ಸಾರ್ವಜನಿಕ ಸ್ಥಳದಲ್ಲಿ ಗಲ್ಲಿಗೇರಿಸಿ ಎಂದು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶಿವಸೇನೆಯ ಮುಖವಾಣಿಯ ಸಾಮ್ನಾ ಪತ್ರಿಕೆಯಲ್ಲಿ ಮುಂಬೈ ಭಯೋತ್ಪಾದನೆ ಕುರಿತು ಸಮಗ್ರ ಸಂಪಾದಕೀಯ ಬರೆದಿರುವ ಬಾಳಾ ಠಾಕ್ರೆ, ಕಸಬ್ ಮಾಡಿರುವ ಕೃತ್ಯಕ್ಕೆ ಕ್ಷಮೆಯೇ ಇಲ್ಲ. ಭಾರತೀಯ ಸಾರ್ವಭೌಮತೆಯ ಮೇಲೆ ಹಲ್ಲೆ ಮಾಡಿರುವ ಉಗ್ರನ ವಿಚಾರಣೆ ಕೂಡ ನಡೆಸದೆ, ನಗರದ ಛತ್ರಪತಿ ಶಿವಾಜಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಗಲ್ಲಿಗೇರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. ಭಾರತದ ಆರ್ಥಿಕತೆ ಮೇಲೆ ತೀವ್ರ ನಷ್ಟ ಉಂಟು ಮಾಡುವುದಲ್ಲದೆ, ನೂರಾರು ಅಮಾಯಕರ ಬಲಿ ತೆಗೆದುಕೊಂಡಿರುವುದು ಅಕ್ಷಮ್ಯ. ಇಂತಹ ನೀಚನಿಗೆ ವಿಚಾರಣೆ ನಡೆಸುವ ಅಗತ್ಯವಿಲ್ಲ. ಆದ್ದರಿಂದ ಈತನನ್ನು ಕೂಡಲೇ ಗಲ್ಲಿಗೇರಿಸಬೇಕು ಎಂದು ಬಾಳಾ ಠಾಕ್ರೆ ಒತ್ತಾಯಿಸಿದ್ದಾರೆ.
ಉಗ್ರ ಕಸಬ್ ಪರವಾಗಿ ವಕೀಲರ ವಕಾಲತ್ತು ನಡೆಸಬಾರದು ಎಂದು ವಕೀಲರ ಸಮೂಹಕ್ಕೆ ಸ್ಪಷ್ಟ ಸಂದೇಶ ರವಾನಿಸಿರುವ ಠಾಕ್ರೆ, ಒಂದು ವೇಳೆ ಉಗ್ರನ ಪರವಾಗಿ ನಿಂತು ಕಾನೂನು ಹೋರಾಟ ಮಾಡಿದಲ್ಲಿ ಅದು ಕೂಡ ದೇಶದ್ರೋಹ ಕೃತ್ಯವಾಗಲಿದೆ. ದೇಶದ್ರೋಹಿಗಳಿಗೆ ರಕ್ಷಣೆ ನೀಡುವುದು ದೇಶದ್ರೋಹ ಕೆಲಸವಲ್ಲದೇ ಮತ್ತೇನು ಎಂದು ಅವರು ಪ್ರಶ್ನಿಸಿದ್ದಾರೆ. ವೃತ್ತಿ ಧರ್ಮಕ್ಕಿಂತ ದೇಶ ಮುಖ್ಯ. ಇದನ್ನು ಎಲ್ಲ ನ್ಯಾಯವಾದಿಗಳು ಅರಿತುಕೊಂಡು ಮುಂದಿನ ಕ್ರಮಕೈಗೊಳ್ಳಬೇಕು. ಇದಕ್ಕೂ ಮೀರಿ ಕಸಬ್ ಪ್ರಕರಣವನ್ನು ಕೈಗೆತ್ತಿಕೊಂಡರೆ ಭಾರತೀಯರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬಾಳಾ ಠಾಕ್ರೆ ಗುಡುಗಿದ್ದಾರೆ.
ಕಸಬ್ ಪರವಾಗಿ ವಾದಿಸಲು ನ್ಯಾಯವಾದಿಗಳಾದ ಅಶೋಕ್ ಸರೋಗಿ ಮತ್ತು ದೇಶಮುಖ್ ಮುಂದೆ ಬಂದಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಶಿವಸೇನೆ ಕಾರ್ಯಕರ್ತರು ಅವರು ವಿರುದ್ಧ ಪ್ರತಿಭಟನೆ ನಡೆಸಿದ್ದರಿಂದ ಕಸಬ್ ಪ್ರಕರಣವನ್ನು ಈ ನ್ಯಾಯವಾದಿಗಳು ಕೈಬಿಟ್ಟಿದ್ದಾರೆ ಎನ್ನಲಾಗಿದೆ.
(ಏಜೆನ್ಸೀಸ್)
ಕಸಬ್
ಪ್ರಕರಣ
ಕೈಗೆತ್ತಿಕೊಂಡ
ವಕೀಲ
ಸರೋಗಿ
?