ಪೇಯಿಂಗ್ ಗೆಸ್ಟ್ ಹೌಸ್ ಮೇಲೆ ನಿಗಾ:ಬಿದರಿ
ಬೆಂಗಳೂರು, ಡಿ. 17 : ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ವಿವಿಧೆಡೆ ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣ ಬೆಳಕಿಗೆ ಬರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಕಟ್ಟಿನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಕ್ಕೋಸ್ಕರ ತನ್ನ ಹದ್ದಿನ ಕಣ್ಣಿನ ವ್ಯಾಪ್ತಿಯನ್ನು ನಾನಾ ಶಾಖೆಗಳಿಗೆ ವಿಸ್ತರಿಸಲು ನಿರ್ಧರಿಸಿದೆ. 'ಬೆಂಗಳೂರಿಗೆ ಭದ್ರತೆ' ಸಂಬಂಧಿಸಿದಂತೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ವಿದೇಶಿ ವಿದ್ಯಾರ್ಥಿಗಳ ಚಲನವಲನದ ಮೇಲೆ ಪ್ರತಿ ಮೂರು ತಿಂಗಳಿಗೊಮ್ಮೆ 'ಕಣ್ಣಿಡಲು' ನಿರ್ಧರಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರ ಬಿದರಿ ಹೇಳಿದರು. ಸಂಬಂಧಪಟ್ಟ ಕಾಲೇಜು ಪ್ರಾಂಶುಪಾಲರು ವಿದೇಶೀ ವಿದ್ಯಾರ್ಥಿಗಳ ವಿವರಗಳನ್ನು ತಮ್ಮ ಬಡಾವಣೆ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಗೆ ನೀಡಬೇಕು. ಪ್ರತಿ ಜೂನ್, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ 1 ರಂದು ಇಂಧ ವಿದ್ಯಾರ್ಥಿಗಳ ಚಟುವಟಿಕೆಗಳ ಬಗ್ಗೆ ಇಲಾಖೆಗೆ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಈ ಸಂಬಂಧ ಪೊಲೀಸರ ಜತೆಗೆ ಸಹಕರಿಸದ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿದರಿ ಎಚ್ಚರಿಕೆ ನೀಡಿದರು.
ಬೆಂಗಳೂರು ಉಗ್ರರ ಅಡಗು ತಾಣ ಎಂದು ಮನವರಿಕೆಯಾಗಿರುವ ಹಿನ್ನೆಲೆಯಲ್ಲಿ ಜಾಗ್ರತೆ ವಹಿಸಲು ಪ್ರತಿ ಠಾಣೆ ವ್ಯಾಪ್ತಿಯಲ್ಲಿ ನಾಗರಿಕ ಸುರಕ್ಷಾ ಸಮಿತಿ ರಚಿಸಲಾಗುವುದು. ಸಮಿತಿಯಲ್ಲಿ 100 ಜನರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲಾಗುವುದು ಎಂದರು. ಅಲ್ಲದೆ, ನಗರದಲ್ಲಿರುವ ಎಲ್ಲ ಪಂಚತಾರಾ ಹೋಟೆಲ್ ಗಳು, ಉಪಾಹಾರ ಗೃಹಗಳು, ಸರ್ವಿಸ್ ಅಪಾರ್ಟ್ ಮೆಂಟ್ ಸೇರಿದಂತೆ ಎಲ್ಲ ಬಗೆಯ ಮನರಂಜನಾ ವ್ಯವಹಾರ ನಡೆಸುವವರು ಇನ್ನು ಮುಂದೆ ಪೊಲೀಸ್ ಆಯುಕ್ತರ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಇಂಥದ್ದೊಂದು ಮಹತ್ವದ ಕ್ರಮ ಜಾರಿಗೊಳಿಸಲು ಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ನಡೆದ ಉನ್ನತ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿದರಿ ಸ್ಪಷ್ಟಪಡಿಸಿದರು.
ಫೆ. 29, 2009ರೊಳಗೆ ಪರವಾನಗಿ ಪಡೆದುಕೊಳ್ಳದಿದ್ದರೆ ಸಂಬಂಧಪಟ್ಟ ಸಂಸ್ಥೆಗಳ ವ್ಯವಹಾರ ಸ್ಥಗಿತಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಕರ್ನಾಟಕ ಪೊಲೀಸ್ ಕಾಯಿದೆ 31ರ ಪ್ರಕಾರ ನಿಯಮ ಕಡ್ಡಾಯವಾಗಿ, ಸಿನಿಮಾ ಮಂದಿರ, ಅಮ್ಯೂಸ್ ಮೆಂಟ್ ಪಾರ್ಕ್, ಸೇರಿದಂತೆ ಎಲ್ಲ ಬಗೆಯ ಮನರಂಜನಾ ಉದ್ಯಮಕ್ಕೂ ಅನ್ವಯಿಸುತ್ತದೆ ಎಂದು ಶಂಕರ ಬಿದಿರಿ ಹೇಳಿದರು.
ಸರ್ವಿಸ್ ಅಪಾರ್ಟ್ ಮೆಂಟ್ ಜತೆಗೆ ಐದಕ್ಕಿಂತ ಹೆಚ್ಚು ಕೊಠಡಿಗಳನ್ನು ಹೊಂದಿರುವ ಪೇಯಿಂಗ್ ಗೆಸ್ಟ್ ಉದ್ಯಮಕ್ಕೂ ಇದು ಅನ್ವಯವಾಗುತ್ತದೆ. ಜ. 15 ರಿಂದ ಪರವಾನಗಿ ಅರ್ಜಿ ನೀಡಲಾಗುವುದು. ಜ. 30 ಕೊನೆಯ ದಿನವಾಗಿರುತ್ತದೆ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)