ಟಾಟಾರಿಂದ ಭಯೋತ್ಪಾದಕ ನಿಗ್ರಹ ಪಡೆ ರಚನೆ?
ನವದೆಹಲಿ, ಡಿ. 17 : ಇತ್ತೀಚೆಗೆ ಮುಂಬೈ ಭಯೋತ್ಪಾದನೆಯಲ್ಲಿ ತಾಜ್ ಹೋಟೆಲ್ ಮೇಲೆ ನಡೆದ ದಾಳಿಯಿಂದ ಎಚ್ಚರಗೊಂಡಿರುವ ರತನ್ ಟಾಟಾ ಸ್ವಂತ ಖರ್ಚಿನಲ್ಲಿ ಭಯೋತ್ಪಾದನಾ ನಿಗ್ರಹ ಪಡೆಯೊಂದನ್ನು (anti-terror machinery) ರಚಿಸಲು ಚಿಂತನೆ ನಡೆಸಿದ್ದಾರೆ.
ಸಿಎನ್ಎನ್-ಐಬಿಎನ್ ವಾರ್ತಾ ವಾಹಿನಿಯ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ ರತನ್ ಟಾಟಾ, ಸಂಸ್ಥೆಯ ಬೆಲೆ ಬಾಳುವ ಆಸ್ತಿ ಮತ್ತು ಉದ್ಯೋಗಿಗಳ ರಕ್ಷಣೆಗಾಗಿ ಸ್ವಂತ ಖರ್ಚಿನಲ್ಲಿ ಭಯೋತ್ಪಾದನಾ ನಿಗ್ರಹ ಪಡೆ ರಚಿಸಲು ಚಿಂತನೆ ನಡೆಸಲಾಗಿದೆ ಎಂದು ಸ್ಪಷ್ಪಪಡಿಸಿದ್ದಾರೆ. ಮುಂಬೈ ಭಯೋತ್ಪಾದನೆಯ ಕಾರ್ಯಾಚರಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಟಾಟಾ, ಪೊಲೀಸರಿಗೆ ಹೆಚ್ಚಿನ ತರಬೇತಿ ನೀಡಬೇಕು. ಪೊಲೀಸ್ ಇಲಾಖೆಯನ್ನೇ ಇನ್ನಷ್ಚು ಬಲಪಡಿಸುವ ಬಗ್ಗೆ ಸರ್ಕಾರಗಳು ಚಿಂತನೆ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ನ. 26 ರಂದು ನಡೆದ ಮುಂಬೈ ಭಯೋತ್ಪಾದನೆಯಲ್ಲಿ ತಾಜ್ ಹೋಟೆಲ್ ನಲ್ಲಿ ಅಡಗಿದ್ದ ಉಗ್ರರು ಹೋಟೆಲ್ ನ ಆಸ್ತಿ ಪಾಸ್ತಿ ಹಾಳು ಮಾಡುವುದಲ್ಲದೆ, ಅನೇಕ ಜನಸಾಮಾನ್ಯರ ಪ್ರಾಣವನ್ನು ತೆಗೆದುಕೊಂಡಿದ್ದರು. ತಾಜ್ ಹೋಟೆಲ್ ಮೇಲೆ ಉಗ್ರರ ನಡೆಸಿದ ಅಟ್ಟಹಾಸದಿಂದ ಟಾಟಾ ಸಂಸ್ಥೆಗೆ ಒಟ್ಟು 100 ಕೋಟಿ ರುಪಾಯಿ ನಷ್ಟವಾಗಿದೆ ಎನ್ನಲಾಗಿದೆ.
(ಏಜೆನ್ಸೀಸ್)