ಉಪಚುನಾವಣಾ ಕಣ : ಚೂರು-ಪಾರು
ಮದ್ದೂರಿನಲ್ಲಿ ಜೆಡಿಎಸ್ ನ ಮಾಜಿ ಸಿಎಂ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ ಪ್ರಚಾರ ಆರಂಭ. ಕಾರವಾರದಲ್ಲಿ ಬಿಜೆಪಿ ಆಸ್ನೋಟಿಕರ್ ಪರ ನಟಿ ಶ್ರುತಿ, ನಿರ್ದೇಶಕ ಎಸ್ ಮಹೇಂದರ್ ಪ್ರಚಾರ ಕಾರ್ಯ. ಮಧುಗಿರಿಯಲ್ಲಿ ಹಿರಿಯ ನಾಯಕರಿಲ್ಲದೆ ಅನಿತಾ ಕುಮಾರಸ್ವಾಮಿ ಬಿಸಿಲಿನಲ್ಲಿ ಮನೆ ಮನೆ ಮುಂದೆ ನಿಂತು ಮತ ಯಾಚನೆ. ಜನರಿಗೆ ಮಧುಗಿರಿಯನ್ನು ಮತ್ತೊಂದು ರಾಮನಗರ ಮಾಡುವ ಆಶ್ವಾಸನೆ. ಅನಿತಾರಿಂದ ಎಸಿ ಕಾರಿನಲ್ಲಿ ಓಡಾಟ, ಮಧುಗಿರಿಯಲ್ಲಿ ಎನ್ನಾರೈ ಒಡೆತನದ ಬಾಡಿಗೆ ಮನೆಯಲ್ಲಿ 13 ದಿನಕ್ಕೆ 30 ಸಾವಿರದಂತೆ ಬಾಡಿಗೆ ನೀಡಿಕೆ.
ಕಾಂಗ್ರೆಸ್ ನ ಪ್ರಚಾರ ಕಾರ್ಯ ದೇವದುರ್ಗದಿಂದ ಆರಂಭ. ನಂತರ ಹುಕ್ಕೇರಿ, ಅರಭಾವಿ, ಕಾರವಾರ, ದೊಡ್ಡ ಬಳ್ಳಾಪುರ, ಮಧುಗಿರಿ ಹಾಗೂ ತುರುವೇಕೆರೆಗೆ ಪಯಣ. ಪ್ರಚಾರಕ್ಕೆ ಸಿದ್ದು ಬಣ ಸಾಥ್ ನೀಡುವ ಭರವಸೆ. ಮಾಜಿ ಕಾಂಗ್ರೆಸ್ಸಿಗ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಎಸ್ ಬಂಗಾರಪ್ಪ ಕೈ ಜತೆ ಜೋಡಿಸುವುದು ಖಚಿತ.
******
ಡಿ. 27 ಸಾಂದರ್ಭಿಕ ರಜೆ ಘೋಷಣೆ
ಬೆಂಗಳೂರು, ಡಿ. 17: ಕರ್ನಾಟಕದಲ್ಲಿ ನಡೆಯುವ ಎಂಟು ವಿಧಾನಸಭಾ ಚುನಾವಣಾ ಕ್ಷೇತ್ರಗಳಿಗೆ ಡಿ. 27 ರಂದು ಮತದಾನ ನಡೆಯಲಿದ್ದು, ಅಂದು ಆ ವ್ಯಾಪ್ತಿಯಲ್ಲಿ ರಜೆಯನ್ನು ಘೋಷಿಸಲಾಗಿದೆ.
ವಿಧಾನಸಭಾ ಕ್ಷೇತ್ರಗಳಾದ ಹುಕ್ಕೇರಿ, ಅರಭಾವಿ, ದೇವದುರ್ಗ (ಎಸ್.ಟಿ), ಕಾರವಾರ, ತುರುವೇಕೆರೆ, ಮಧುಗಿರಿ, ದೊಡ್ಡಬಳ್ಳಾಪುರ, ಮದ್ದೂರು, ಈ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಮೇಲ್ಕಂಡ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಎಲ್ಲಾ ಶಾಲಾ-ಕಾಲೇಜುಗಳ ನೌಕರರಿಗೆ ಡಿ.27 ರಂದು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿದೆ.
*****
ದೊಡ್ಡಬಳ್ಳಾಪುರ ಉಪ ಚುನಾವಣೆ : ಸಹಾಯವಾಣಿ ಕೇಂದ್ರ
ದೊಡ್ಡಬಳ್ಳಾಪುರ ಉಪಚುನಾವಣೆಗೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರು, ವಿಶೇಷವಾಗಿ ಮತದಾರರು, ಚುನಾವಣಾ ಕುರಿತ ಮಾಹಿತಿಯನ್ನು ಪಡೆಯಲು ಅಥವಾ ದೂರುಗಳನ್ನು ದಾಖಲಿಸಲು 24 ಗಂಟೆಗಳ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ : 080-2286 7007 ಮತ್ತು ಫ್ಯಾಕ್ಸ್ ಸಂಖ್ಯೆ. 080-2286 8051. ಅಂತೆಯೇ, ಇದೇ ಮಾದರಿಯ ಸಹಾಯವಾಣಿ ಕೇಂದ್ರವನ್ನು ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿಯಲ್ಲೂ ಸ್ಥಾಪಿಸಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿಯ ದೂರವಾಣಿ ಸಂಖ್ಯೆ: 080 - 7628 893 ಮತ್ತು ಫ್ಯಾಕ್ಸ್ ಸಂಖ್ಯೆ 080 - 7628 892 ಆಗಿದೆ. ಈ ದೂರವಾಣಿ ಸಂಖ್ಯೆಗಳ ಮೂಲಕ ಸಾರ್ವಜನಿಕರು, ವಿಶೇಷವಾಗಿ ಮತದಾರರು, ಚುನಾವಣಾ ಮಾಹಿತಿ ಪಡೆಯಬಹುದು. ಅಂತೆಯೇ, ಮತದಾರರ ಪಟ್ಟಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಕುರಿತಂತೆ ದೂರುಗಳನ್ನು ದಾಖಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಕೆ. ರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)