ನೋಬೆಲ್ ವಿಜೇತರ ಮನಗೆದ್ದ ಹೇಮಾನರ್ತನ

ಇಲ್ಲಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಇನ್ ಫಾರ್ಮೇಷನ್ ಟೆಕ್ನಾಲಜೀಸ್, ಅಲಹಾಬಾದ್ (IIIT-A) ಆಯೋಜಿಸಿರುವ 'ನೋಬೆಲ್ ಪ್ರಶಸ್ತಿ ವಿಜೇತರ ವಿಜ್ಞಾನ ಸಮಾವೇಶ'ದಲ್ಲಿ ಹೇಮಾಮಾಲಿನಿ ಅದ್ಭುತ ಪ್ರದರ್ಶನ ನೀಡಿದರು. ಡಿಸೆಂಬರ್ 15ರಿಂದ 21ರವರೆಗೆ ನಡೆಯುತ್ತಿರುವ ಸಮಾವೇಶದಲ್ಲಿ ವಿಶ್ವದ ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳು ಭಾಗವಹಿಸುತ್ತಿದ್ದಾರೆ. ನೋಬೆಲ್ ಪ್ರಶಸ್ತಿ ವಿಜೇತರಲ್ಲದೆ ಅಂತಾರಾಷ್ಟ್ರೀಯ ಖ್ಯಾತಿಯ ಅನೇಕ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ.
ಸತತ ಎರಡು ಗಂಟೆಗಳ ಕಾಲ 40 ಕಲಾವಿದರಿದ್ದ ತಂಡ ನೃತ್ಯದ ವಿವಿಧ ಪ್ರಕಾರಗಳನ್ನು ಪ್ರದರ್ಶಿಸಿತು. ಬಿಟ್ಟರೆ ಮತ್ತೆ ಸಿಗಲಿಕ್ಕಿಲ್ಲವೆಂದು ವಿಜ್ಞಾನಿಗಳು ಮತ್ತು ಮತ್ತವರ ಪತ್ನಿಯರು ಹೇಮಾಮಾಲಿನಿ ಮತ್ತವರ ನೃತ್ಯಸೌಂದರ್ಯವನ್ನು ಕ್ಯಾಮೆರಾ ಮತ್ತು ವಿಡಿಯೋಗಳಲ್ಲಿ ಬಂಧಿಸುವಲ್ಲಿ ನಿರತರಾಗಿದ್ದು ಕಂಡುಬಂದಿತು. ನೃತ್ಯ ಪ್ರದರ್ಶನದ ನಂತರ ಎರಡು ಸಾವಿರಕ್ಕೂ ಹೆಚ್ಚಿನ ಪ್ರೇಕ್ಷಕರು ಹೇಮಾಮಾಲಿನಿ ಮತ್ತು ತಂಡಕ್ಕೆ ಎದ್ದು ನಿಂತು ಕರತಾಡನ ಮಾಡಿ ನೃತ್ಯವೈಭವವನ್ನು ಶ್ಲಾಘಿಸಿದರು.
ರಾಧಾ-ಕೃಷ್ಣರ ಪ್ರಣಯ ಪ್ರಸಂಗವಿದ್ದ ನೃತ್ಯಪ್ರದರ್ಶನ ಪ್ರಮುಖ ಆಕರ್ಷಣೆಯಾಗಿತ್ತು. ಕೃಷ್ಣ ರಾಕ್ಷಸರೊಡನೆ ಹೋರಾಡುವ ಪ್ರಸಂಗಗಳೂ ನೃತ್ಯರೂಪದಲ್ಲಿ ವಿಜೃಂಭಿಸಿದವು. ಭಾರತದ ಖ್ಯಾತ ಕಲಾವಿದರಾದ ಪೀನಜ್ ಮಸಾನಿ, ಶ್ರದ್ಧಾ ಶರ್ಮಾ, ಅನೂಪ್ ಜಲೋಟಾ, ಶೋವನಾ ನಾರಾಯಣ್, ಭೂಪಿಂದರ್ ಮತ್ತು ಮಿತಾಲಿ ಮುಂತಾದವರು ಕಲಾರಸಿಕರ ಮನತಣಿಸಲಿದ್ದಾರೆ.
12 ಅಂತಾರಾಷ್ಟ್ರೀಯ ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳು ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದು ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕುರಿತಂತೆ ಭಾರತದ ವಿಜ್ಞಾನಿಗಳು ಮತ್ತು ಮಾಹಿತಿ ತಂತ್ರಜ್ಞಾನ ವಿದ್ಯಾರ್ಥಿಗಳೊಂದಿಗೆ ಮುಕ್ತ ಚರ್ಚೆ ನಡೆಸಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಇದನ್ನೂ ಓದಿ
ಕನಸಿನ ಕನ್ಯೆಯ ಸೌಂದರ್ಯದ ರಹಸ್ಯವೇನು?












Click it and Unblock the Notifications