ಉಗ್ರರು, ಅಕ್ರಮ ವಲಸೆ ತಡೆಗೆ ಒಂದೇ ಆಸ್ತ್ರ
ನವದೆಹಲಿ, ಡಿ. 17 : ಭಯೋತ್ಪಾದನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ ಸ್ಥಾಪನೆ ಹಾಗೂ ಭಯೋತ್ಪಾದನೆ ತಡೆ ಕಾಯಿದೆಯನ್ನು ಮತ್ತಷ್ಟು ಬಲಪಡಿಸುವ ವಿಧೇಯಕವನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ವಿಧೇಯಕ 2008 ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆ ತಿದ್ದುಪಡಿ ವಿಧೇಯಕಗಳನ್ನು ಗೃಹ ಸಚಿವ ಪಿ ಚಿದಂಬರಂ ಮಂಡಿಸಿದರು. ಇವುಗಳಿಗೆ ಕೇಂದ್ರ ಸಂಪುಟ ಸೋಮವಾರ ಒಪ್ಪಿಗೆ ನೀಡಿತ್ತು. ಸೇನಾ ಹಿಂಸಾಚಾರ, ಅಕ್ರಮ ನುಸುಳುವಿಕೆ ಹಾಗೂ ನಕ್ಸಲರ ಹಿಂಸೆಯನ್ನೂ ವ್ಯಾಖ್ಯಾನದ ಅಡಿ ತರುವುದು ವಿಧೇಯಕದ ಉದ್ದೇಶವಾಗಿದೆ.
ಯಾವುದೇ ದುಷ್ಕೃತ್ಯ ನಡೆದ ರಾಜ್ಯದಿಂದ 15 ದಿನದಲ್ಲಿ ಕೇಂದ್ರ ಸರ್ಕಾರ ವರದಿ ತರಿಸಿಕೊಂಡು ಅದರ ಆಧಾರದಲ್ಲಿ ಈ ಕೃತ್ಯ ಭಯೋತ್ಪಾದನೆಗೆ ಸಂಬಂಧಿಸಿದ್ದೇ ಅಲ್ಲವೇ ಎಂದು ನಿರ್ಧರಿಸಲಿದೆ. ಕೃತ್ಯ ಭಯೋತ್ಪಾದನೆಗೆ ಸಂಬಂಧಿಸಿದ್ದು ಎಂದು ಕೇಂದ್ರ ನಿರ್ಧರಿಸಿದರೆ, ಎನ್ ಐಎ ತನಿಖೆ ಕೈಗೆತ್ತಿಕೊಳ್ಳಲಿದೆ. ರಾಜ್ಯ ಸರ್ಕಾರ ತನಿಖೆಗೆ ಎಲ್ಲ ನೆರವನ್ನೂ ನೀಡಬೇಕು. ಇದರಲ್ಲಿ ಸಬ್ ಇನ್ಸ್ ಪೆಕ್ಟರ್ ಗಿಂತ ಮೇಲಿನ ಅಧಿಕಾರಿಗಳಿರುತ್ತಾರೆ. ಭಯೋತ್ಪಾದನೆಗೆ ಪ್ರಕರಣಕ್ಕೆ ಸಂಬಂಧಿಸಿ, ಸ್ಥಳೀಯ ಪೊಲೀಸ್ ಅಧಿಕಾರಿಗಳಿಗಿರುವ ಎಲ್ಲ ಅಧಿಕಾರ, ಕರ್ತವ್ಯ ಸೌಲಭ್ಯಗಳನ್ನು ಇವರು ಹೊಂದಿರುತ್ತಾರೆ.
ದೇಶದ ಯಾವುದೇ ಭಾಗದಲ್ಲಿ ಭಯೋತ್ಪಾದನೆ ಚಟುವಟಿಕೆ ಅಥವಾ ಅಪರಾಧ ತನಿಖೆ ನಡೆಸುವ ವಿಶೇಷ ಅಧಿಕಾರ ಇವರಿಗಿರುತ್ತದೆ. ಎನ್ ಐಎ ತನಿಖೆ ನಡೆಸುವ ಪ್ರಕರಣಗಳು ಈ ಕಾಯಿದೆಯಡಿ ನೇಮಕಗೊಳ್ಳುವ ವಿಶೇಷ ನ್ಯಾಯಾಲಯಗಳಲ್ಲಿ ಪ್ರತಿದಿನ ವಿಚಾರಣೆ ನಡೆಸಲಾಗುತ್ತದೆ. ವಿಶೇಷ ಕೋರ್ಟ್ ಬಯಸಿದರೆ. ವಿಚಾರಣೆಯನ್ನು ರಹಸ್ಯವಾಗಿ ನಡೆಸಬಹುದು. ಸಾಕ್ಷಿಯ ಜೀವಕ್ಕೆ ಅಪಾಯವಿದೆ ಎಂದು ಕಂಡು ಬಂದರೆ, ಆತನ ಗುರುತು, ಪರಿಚಯವನ್ನು ರಹಸ್ಯವಾಗಿ ಇಡಬಹುದು. ಯಾವುದೇ ವಿಶೇಷ ಕೋರ್ಟ್ ನ ತನಿಖೆಯನ್ನು ಇನ್ನಾವುದೇ ವಿಶೇಷ ಕೋರ್ಟ್ ಗೆ ವರ್ಗಾಯಿಸಬಹುದು.
ಕಾನೂನು ಬಾಹಿರ ಚಟುವಟಿಕೆಗಳ ತಡೆ ತಿದ್ದುಪಡಿ ವಿಧೇಯಕ, ಈ ಕಾಯಿದೆಯನ್ನು ಇನ್ನಷ್ಟು ಕಠಿಣ ಹಾಗೂ ಪರಿಣಾಮಕಾರಿಯಾಗಿಸುವ ಗುರಿ ಹೊಂದಿದೆ. ವಿಚಾರಣಾ ಸೆರೆ ಅವಧಿ 90 ದಿನಗಳಿಂದ 180 ದಿನಕ್ಕೆ ಹೆಚ್ಚಳ. ಜಾಮೀನು ನಿರಾಕರಣೆ ಸೇರಿದಂತೆ ಹಲವಾರು ಅಂಶಗಳನ್ನು ಒಳಗೊಂಡಿದೆ.
(ಸ್ನೇಹ ಸೇತು : ವಿಜಯ ಕರ್ನಾಟಕ)












Click it and Unblock the Notifications