ಸುಳ್ಳಿಗೂ ಡಾಕ್ಟರೇಟ್ ಪದವಿನಾ ? ಖರ್ಗೆ ವ್ಯಂಗ್ಯ
ರಾಯಚೂರು, ಡಿ. 15 : ಸುಳ್ಳು ಆಶ್ವಾಸನೆ ಕೊಡಲು ನಿಸ್ಸೀಮರಾಗಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸುಳ್ಳಿನ ಮಾಹಾಪೋರ ಹರಿಸಿಯೇ ದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆ ಮೇಲೆ ಡಾಕ್ಟರೇಟ್ ಪದವಿ ನೀಡಿದಲ್ಲಿ ನಮ್ಮ ಅಭ್ಯಂತರವೇನೂ ಇಲ್ಲ ಎಂದು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತೀವ್ರ ಲೇವಡಿ ಮಾಡಿದರು.
ಯಡಿಯೂರಪ್ಪ ಯಾವ ಮಹಾನ್ ಸಾಧನೆ ಮಾಡಿದ್ದಾರೆ ಎಂದು ಅಮೆರಿಕಕ್ಕೆ ತೆರಳಿ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆಯುತ್ತಾ ಬಂದರೂ ಸರಿಯಾಗಿ ಅಧಿಕಾರ ನಡೆಸಲು ಬರುತ್ತಿಲ್ಲ. ಕೈಲಾಗದ ಭರವಸೆಗಳನ್ನು ನೀಡುತ್ತಾ, ಜನತೆಯನ್ನು ಮೋಸ ಮಾಡುತ್ತಿರುವ ಯಡಿಯೂರಪ್ಪ ಅವರಿಗೆ ಡಾಕ್ಟರೇಟ್ ಪಡೆಯುವ ಯಾವ ಅರ್ಹತೆ ಇದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಬಾಬಾ ಅಮ್ಟೆಯಂತೆ ಸಮಾಜ ಸೇವೆಯಲ್ಲಿ ತೊಡಗಿದ್ದಾರೆಯೇ, ಇಂತಹ ಗೌರವ ಪಡೆದುಕೊಳ್ಳಲು ಯಾವುದಾದರೂ ರಂಗದಲ್ಲಿ ಗಮನಾರ್ಹ ಸಾಧನೆ ಮಾಡಿರಬೇಕಲ್ಲ. ಯಡಿಯೂರಪ್ಪ ಏನು ಮಾಡಿದ್ದಾರೆ. ಮುಖ್ಯಮಂತ್ರಿ ಆಗಿದ್ದೇ ಒಂದು ಸಾಧನೆ ಅಂತಾದರೆ ಸಿಎಂ ಆಗಿ ಆರು ತಿಂಗಳು ಕಳೆದಿಲ್ಲ. ಹೀಗಿದ್ದಾಗ ಡಾಕ್ಟರೇಟ್ ಸಿಕ್ಕಿರುವ ಬಗೆ ಆದರೂ ಹೇಗೆ ಎಂದು ಖರ್ಗೆ ಕಿಡಿಕಾರಿದರು. ಇಂತಹ ಕೆಲಸಕ್ಕೆ ಬಾರದ ರಾಜಕೀಯ ಬಿಟ್ಟು ಜನರು ನೀಡಿರುವ ಅವಕಾಶವನ್ನು ಉಪಯೋಗಿಸಿಕೊಂಡು ಉತ್ತಮ ಕೆಲಸ ಮಾಡಿದರೆ ಒಳಿತು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಿವಿ ಮಾತು ಹೇಳಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ಯಡಿಯೂರಪ್ಪ
ಇದೀಗ
ಡಾ.ಯಡಿಯೂರಪ್ಪ