ಓಟಿಗಾಗಿ ನೋಟು ,ಅಮರ್ ಸಿಂಗ್ ನಿರ್ದೋಷಿ
ನವದೆಹಲಿ, ಡಿ. 15 : ತೀವ್ರ ಕುತೂಹಲ ಕೆರಳಿಸಿದ್ದ ವೋಟಿಗಾಗಿ ನೋಟು (cash for vote) ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್, ಕಾಂಗ್ರೆಸ್ ನ ಅಹ್ಮದ್ ಪಟೇಲ್ ಅವರಿಗೆ ಏಳು ಸದಸ್ಯರ ಸಂಸದೀಯ ಸಮಿತಿ ಕ್ಲಿನ್ ಚಿಟ್ ನೀಡಿದೆ.
ಅಮೆರಿಕದೊಂದಿಗೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಎಡಪಕ್ಷಗಳು ಯುಪಿಎಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರ ಕಳೆದ ಜುಲೈ 22 ರಂದು ವಿಶ್ವಾಸಮತಯಾಚಿಸಿತ್ತು. ಆಗ ಸಮಾಜವಾದಿ ಪಕ್ಷ ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಿತ್ತು. ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ತಮಗೆ ಹಣದ ಅಮಿಷ ನೀಡಿ ಮತ ಪಡೆಯಲು ಯತ್ನಿಸಿದರು ಎಂದು ಆರೋಪಿಸಿ ಮಧ್ಯಪ್ರದೇಶ ಮೂವರು ಬಿಜೆಪಿ ಸಂಸದರು ಸಂಸತ್ತಿನಲ್ಲಿಯೇ ನೋಟಿನ ಕಂತೆಗಳನ್ನು ತೂರಾಡಿದ್ದರು. ಇದು ಇಡೀ ಭಾರತವೇ ತಲೆ ತಗ್ಗಿಸುವಂತೆ ಮಾಡಿತ್ತು. ಸಂಸದರು ಹಣ ತೂರಾಡಿದ ಚಿತ್ರವನ್ನು ಭಾರತದ ಪ್ರತಿಯೊಬ್ಬ ನಾಗರಿಕರೂ ತೀವ್ರ ಖಂಡಿಸಿದ್ದರು.
ಸಂಸದರು ನೋಟಿನ ಕಂತೆಗಳನ್ನು ತೂರಾಡಿದ ಪ್ರಕರಣಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಲೋಕಸಭಾಧ್ಯಕ್ಷ ಸೋಮನಾಥ್ ಚಟರ್ಜಿ, ಪ್ರಕರಣವನ್ನು ಸಂಸದೀಯ ತನಿಖೆಗೆ ಒಪ್ಪಿಸಿದ್ದರು. ತನಿಖೆ ನಡೆಸಿದ ಸಂಸದೀಯ ಸಮಿತಿ ಸಮಾಜವಾದಿ ಮುಖಂಡ ಅಮರ್ ಸಿಂಗ್ ಹಾಗೂ ಕಾಂಗ್ರೆಸ್ ಅಹ್ಮದ್ ಪಟೇಲ್ ಅವರು ಈ ಪ್ರಕರಣದಲ್ಲಿ ನಿರ್ದೋಷಿಗಳು ಎಂದು ಕ್ಲಿನ್ ಚಿಟ್ ನೀಡಿದೆ.
ಕಾಂಗ್ರೆಸ್ ನ ಹಿರಿಯ ಸಂಸದ ಕಿಶೋರ್ ಚಂದ್ರ ಸೂರ್ಯನಾರಾಯಣ ದೇವೂ ನೇತೃತ್ವದ ಸಂಸದೀಯ ಸಮಿತಿಯಲ್ಲಿ ವಿಜಯಕುಮಾರ್ ಮಲ್ಹೋತ್ರಾ (ಬಿಜೆಪಿ), ಮೊಹ್ಮದ್ ಸಲೀಂ (ಸಿಪಿಐಎಂ) ಸೇರಿ ಸದಸ್ಯರನ್ನು ಒಳಗೊಂಡ ಸಮಿತಿ 466 ಪುಟಗಳ ವರದಿಯನ್ನು ತಯಾರಿಸಿದೆ. ಬಿಜೆಪಿಯ ಅಶೋಕ್ ಅರ್ಗಲ್, ಫಾಗನ್ ಸಿಂಗ್ ಕುಲಾಸ್ತೆ ಹಾಗೂ ಮಾಹಾವೀರ ಬೋಗಾರ್ ಈ ಮೂರು ಸಂಸದರು ಯುಪಿಎಗೆ ಮತ ನೀಡಿದರೆ 3 ಕೋಟಿ ರುಪಾಯಿ ನೀಡುವುದಾಗಿ ಸಮಾಜವಾದಿ ಮುಖಂಡ ಅಮರ್ ಸಿಂಗ್ ಆಮಿಷ ಒಡ್ಡಿದ್ದರು ಎಂದು ಆರೋಪಿಸಿ ಸಂಸತ್ತಿನಲ್ಲಿ ರೊಕ್ಕ ತೂರಾಡುವ ಮೂಲಕ ತೀವ್ರ ಕೋಲಾಹಲಕ್ಕೆ ಕಾರಣರಾಗಿದ್ದರು.
(ದಟ್ಸ್ ಕನ್ನಡ ವಾರ್ತೆ)