ದೇವಾಲಯ ಧ್ವಂಸ ಪೂಜಾರಿ ಅತ್ಮಹತ್ಯೆಗೆ ಯತ್ನ
ಮೈಸೂರು, ಡಿ. 12 : ಚಾಮುಂಡಿ ಬೆಟ್ಟದ ತಪ್ಪಲಿನ ಗೊಬ್ಬಳಿಕಟ್ಟೆ ಮಡಿವಾಳ ಮಾಚಿದೇವ ದೇವಾಲಯ ಧ್ವಂಸ ಮಾಡಿದ ಹಿನ್ನೆಲೆಯಲ್ಲಿ ಮನನೊಂದ ದೇವಾಲಯದ ಪೂಜಾರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ.
ಚಾಮುಂಡಿ ಬೆಟ್ಟ ತಪ್ಪಲಿನ ಮಾಚಿದೇವ ದೇವಾಲಯದ ಪೂಜಾರಿ ಶಿವಣ್ಣ ಅತ್ನಹತ್ಯೆಗೆ ಯತ್ನಿಸಿದ ವ್ಯಕ್ತಿ. ದೇವಾಲಯ ಮತ್ತು ಧೋಬಿಘಾಟ್ ಪ್ರದೇಶವನ್ನು ಇತ್ತೀಚೆಗೆ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. ಇದನ್ನು ಪ್ರತಿಭಟಿಸಿ ಮಡಿವಾಳ ಜನಾಂಗದವರು ಪ್ರತಿಭಟನೆ ನಡೆಸುತ್ತಿದ್ದರು. ಮಡಿವಾಳ ಜನಾಂಗದ ಅನೇಕ ಮಂದಿ ಬಟ್ಟೆ ಒಗೆಯಲು ಸೀಮಿತವಾಗಿದ್ದ ಧೋಬಿಘಾಟ್ ಜಾಗವನ್ನು ಬೆಂಗಳೂರು ಮೂಲದ ಖಾಸಗಿ ವ್ಯಕ್ತಿಯೊಬ್ಬರು ಖರೀದಿ ಮಾಡಿದ್ದಾರೆ.
ಗುರುವಾರ ದಿಢೀರನೆ ಧೋಬಿಘಾಟ್ ಹಾಗೂ ಪಕ್ಕದಲ್ಲಿದ್ದ ದೇವಾಲಯ ಧ್ವಂಸ ಮಾಡಲಾಗಿತ್ತು. ಇದರಿಂದ ತೀವ್ತ ಮನನೊಂದ ಪೂಜಾರಿ ಶಿವಣ್ಣ ಸ್ಥಳದಲ್ಲಿಯೇ ವಿಷಸೇವನೆ ಮಾಡಿದರು ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಕೆ ಆರ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)