ಪಾಕಿಸ್ತಾನ ಉಗ್ರರ ಸ್ವರ್ಗ:ಅಡ್ವಾಣಿ
ನವದೆಹಲಿ, ಡಿ. 11 : ಭಯೋತ್ಪಾದನೆ ಹತ್ತಿಕ್ಕಲು ಕೇಂದ್ರದ ಯುಪಿಎ ಸರ್ಕಾರ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೂ ಪ್ರತಿಪಕ್ಷ ಬಿಜೆಪಿ ಸೇರಿದಂತೆ ಎನ್ ಡಿ ಎ ಅಂಗಪಕ್ಷಗಳು ಸರ್ಕಾರದ ಪರ ನಿಲ್ಲುತ್ತೇವೆ ಎಂದು ಕೇಂದ್ರದ ಪ್ರತಿಪಕ್ಷದ ನಾಯಕ ಎಲ್ ಕೆ ಆಡ್ವಾಣಿ ಕೇಂದ್ರ ಸರ್ಕಾರಕ್ಕೆ ಭರವಸೆ ನೀಡಿದರು.
ಇಂದಿನಿಂದ ಆರಂಭವಾದ ಚಳಗಾಲ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರದ ಸಮಗ್ರತೆ, ಏಕತೆಯನ್ನು ಕಾಪಾಡಿಕೊಳ್ಳಲು ಭಯೋತ್ಪಾದನೆ ವಿರುದ್ಧ ಒಂದಾಗಿ ಹೋರಾಟ ನಡೆಸುವುದು ಅವಶ್ಯವಾಗಿದೆ ಎಂದರು. ಮುಂಬೈ ದಾಳಿಯ ನಂತರ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಎಲ್ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಡ್ವಾಣಿ, ಲಷ್ಕರ್ ಇ ತೊಯ್ಬಾ ಹಾಗೂ ಅದರ ಅಂಗ ಸಂಘಟನೆ ಜಮಾತೆ ಉದ್ ದವಾ ನಿಷೇಧಕ್ಕೆ ಸಂಬಂಧಿಸಿದಂತೆ ಸರ್ಕಾರ ತಾಳಿದ ನಿಲುವು , ಪಾಕಿಸ್ತಾನಕ್ಕೆ ನೀಡಿದ ಉಗ್ರ ಸಂದೇಶ ಎಲ್ಲವೂ ಜನಪರವಾಗಿದ್ದವು ಎಂದು ಅವರು ಸರ್ಕಾರದ ಬೆನ್ನುತಟ್ಟಿದರು.
ಮುಂಬೈ ದಾಳಿಯನ್ನು ತೀವ್ರವಾಗಿ ಖಂಡಿಸಿದ ಅಡ್ವಾಣಿ, ಪಾಕಿಸ್ತಾನ ಸರ್ಕಾರದ ನೀತಿಯನ್ನು ಬಲವಾಗಿ ವಿರೋಧಿಸಿದರು. ಪಾಕ್ ಮೂಲದ ಉಗ್ರರು ಮುಂಬೈ ದಾಳಿ ನಡೆಸಿರುವುದು ತನಿಖೆಯಿಂದ ತಿಳಿದಿದೆ. ಪಾಕ್ ಸೇನಾಧಿಕಾರಿಗಳು ಮಾನವ ಬಾಂಬರ್ ಗಳಿಗೆ ತರಬೇತಿ ನೀಡಿ ಬೋಟ್ ಮೂಲಕ ಭಾರತದ ಒಳಗೆ ನುಸುಳಲು ಸಹಕಾರ ನೀಡಿರುವುದು ಬಯಲಿಗೆ ಬಂದಿದೆ. ಹೀಗಿದ್ದರೂ ಕೂಡಾ ಪಾಕ್ ಸರ್ಕಾರ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದಿರುವ ನಾಲ್ಕು ಮಂದಿ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಕೇಂದ್ರ ಸರ್ಕಾರ ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಬೇಕು ಎಂದು ಅಡ್ವಾಣಿ ಒತ್ತಾಯಿಸಿದರು. ಉಗ್ರರನ್ನು ಬಂಧಿಸಿದ್ದೇನೆ ಎಂದು ನಾಟಕವಾಡುತ್ತಿರುವ ಪಾಕಿಸ್ತಾನ ನಂತರ ಅವರನ್ನು ಬಿಡುಗಡೆ ಮಾಡಲಿದೆ. ಇದರಿಂದ ವಿಶ್ವಸಂಸ್ಥೆ ಮೇಲೆ ಒತ್ತಡ ತಂದು ಸಿಕ್ಕಿರುವ ನಾಲ್ಕು ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಬೇಕು ಎಂದು ಅಡ್ವಾಣಿ ಆಗ್ರಹಿಸಿದರು. ಪಾಕಿಸ್ತಾನ ಉಗ್ರರನ್ನು ತಯಾರಿಸುವ ಮಾಡುವ ಕಾರ್ಖಾನೆ ಎಂದು ಅವರು ಆರೋಪಿಸಿದರು.
(ದಟ್ಸ್
ಕನ್ನಡ
ವಾರ್ತೆ)
ಜಮಾತೆ
ಉದ್
ದವಾಕ್ಕೆ
ನಿಷೇಧ:
ವಿಶ್ವಸಂಸ್ಥೆ