ಅನಿತಾ ಸ್ಪರ್ಧೆಗೆ ದೇವೇಗೌಡ ಸಮರ್ಥನೆ
ನವದೆಹಲಿ, ಡಿ. 11 : ಮಧುಗಿರಿ ಕ್ಷೇತ್ರದ ಮತದಾರರು ತೀವ್ರವಾಗಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪತ್ನಿ ಅನಿತಾ ಅವರನ್ನು ಅಖಾಡಕ್ಕೆ ಇಳಿಸಲು ತೀರ್ಮಾನಿಸಲಾಯಿತು ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಸ್ಪಷ್ಟಪಡಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಕೆಎಎಸ್ ಅಧಿಕಾರಿ ವೀರಭದ್ರಯ್ಯ ಅವರಿಗೆ ಸ್ವಯಂ ನಿವೃತ್ತಿಗೆ ಸರ್ಕಾರ ಅವಕಾಶ ನೀಡಿದಿರುವುದರಿಂದ ಈ ಕ್ರಮಕ್ಕೆ ಮುಂದಾಗಬೇಕಾಯಿತು ಎಂದರು. ಒಂದು ಕಾಲದ ದೇವೇಗೌಡ ಶಿಷ್ಯರಾಗಿದ್ದ ಸಿ ಚೆನ್ನಿಗಪ್ಪ ಇದೀಗ ಬಿಜೆಪಿಯಿಂದ ಮಧುಗಿರಿಯಲ್ಲಿ ಸ್ಪರ್ಧಿಸಿದ್ದಾರೆ. ಜೆಡಿಎಸ್ ನಿಂದ ಬಿಜೆಪಿ ಪಕ್ಷಾಂತರ ಮಾಡಿರುವ ಅವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಅಲ್ಲಿನ ಜನರ ಅಶಯವಾಗಿದೆ. ಅವರನ್ನು ಸೋಲಿಸಲು ಜೆಡಿಎಸ್ ಪಕ್ಷದಿಂದ ನಿಮ್ಮ ಕುಟುಂಬದ ಯಾರನ್ನಾದರೂ ಮರುಚುನಾವಣೆಯಲ್ಲಿ ಕಣಕ್ಕಿಳಿಸಿ ಎಂದು ಮಧುಗಿರಿ ಕ್ಷೇತ್ರದ ಮತದಾರರ ತೀವ್ರ ಒತ್ತಡ ಹೇರಿದ್ದರು ಎಂದು ದೇವೇಗೌಡ ಹೇಳಿದರು.
ಸುಮಾರು 40 ಸಾವಿರ ಜನರು ನನ್ನ ಮನೆಗೆ ಬಂದಿದ್ದಾರೆ. ನಿಮ್ಮಹಿಂದೆ ನಾವಿದ್ದೇವೆ. ಚೆನ್ನಿಗಪ್ಪ ಅವರನ್ನು ಸೋಲಿಸಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಎಂದು ಒತ್ತಾಯ ಮಾಡಿದ್ದರು. ವೀರಭದ್ರಯ್ಯ ಅವರಿಗೆ ವಿಆರ್ಎಸ್ ಸಿಗದ ಹಿನ್ನೆಲೆಯಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನೇ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ತೀರ್ಮಾನಿಸಲಾಯಿತು ಎಂದು ಗೌಡರು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗೌಡರು, ಬಿಜೆಪಿ ಅತ್ಯಂತ ಕೆಟ್ಟ ಆಡಳಿತ ನಡೆಸತೊಡಗಿದೆ. ಸಂವಿಧಾನದ ಪ್ರಕಾರ ಸ್ವಯಂ ನಿವೃತ್ತಿಗೆ ಅವಕಾಶ ಇದ್ದರೂ ಕೂಡಾ ವಿಆರ್ ಎಸ್ ನೀಡದೆ ಹೀನ ರಾಜಕೀಯ ಮಾಡಿರುವುದು ಅಕ್ಷಮ್ಯ ಅಪರಾಧ ಎಂದರು.
(ದಟ್ಸ್
ಕನ್ನಡ
ವಾರ್ತೆ)
ಕುರುಬರಿಗಾಗಿ
ಸಿದ್ದು
ಬಿಜೆಪಿ
ಜೊತೆ
ಮೈತ್ರಿ