ಸಮಾವೇಶಗಳು ಬೆಂಗಳೂರಿನ ಹೊರಗಿರಲಿ
ಬೆಂಗಳೂರು, ಡಿ. 11 : ರಾಜಕೀಯ ಪಕ್ಷಗಳು ನಡೆಸುವ ಸಮಾವೇಶಗಳಿಗೆ ಬೆಂಗಳೂರು ನಗರದೊಳಗೆ ಅವಕಾಶ ನೀಡುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಈ ಹಿನ್ನೆಲೆಯಲ್ಲಿ ಇಂತಹ ರಾಜಕೀಯ ಸಮಾವೇಶಗಳಿಗೆ ನಗರದೊಳಗೆ ಅವಕಾಶ ಮಾಡಿಕೊಡಬಾರದು ಎಂದು ಹೈಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿದೆ.
ನ್ಯಾಯಮೂರ್ತಿ ಎಸ್ ಆರ್ ಬನ್ನೂರಮಠ್ ಅವರಿದ್ದ ನ್ಯಾಯಪೀಠ, ನಗರದೊಳಗೆ ರಾಜಕೀಯ ಸಮಾವೇಶಗಳಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದೊಳಗೆ ಸಮಾವೇಶಕ್ಕೆ ಅನುಮತಿ ನೀಡುವುದಲ್ಲದೆ, ಸರ್ಕಾರಿ ಬಸ್ ಗಳನ್ನು ಇಂತಹ ಕಾರ್ಯಕ್ರಮಗಳಿಗೆ ನೀಡುವುದು ಕಾರಣವಾದರೂ ಏನು ಎಂದು ಪ್ರಶ್ನಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು ಎಂದು ಹೈಕೋರ್ಟ್ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದೆ.
ನ್ಯಾಯಾಲಯದ ಸೂಚನೆ ಜಾರಿಗೆ ತರವುದರ ಜೊತೆಗೆ ಮುಂದಿನ ದಿನಗಳಲ್ಲಿ ಇಂತಹ ರಾಜಕೀಯ ಸಮಾವೇಶಳಗಳು ನಡೆದರೆ ಮುಂಚಿತವಾಗಿ ಸಂಬಂಧಿಸಿ ಪಕ್ಷದಿಂದ ಕಾರ್ಯಕ್ರಮದ ಪ್ರಮಾಣದ ಗುರುತಿಸಿ ಅಗತ್ಯ ಹಣವನ್ನು ಠೇವಣಿಯಾಗಿಟ್ಟುಕೊಳ್ಳುವಾಗಿ ಸರ್ಕಾರದ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ನ್ಯಾಯಾಲಯಕ್ಕೆ ವಿವರಿಸಿದರು. ಸಮಾವೇಶಗಳು ನಡೆದ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯುಂಟಾದಲ್ಲಿ ಠೇವಣಿ ಹಣದಲ್ಲಿ ಕಡಿತ ಮಾಡಿಕೊಂಡು ಮಿಕ್ಕ ಹಣವನ್ನು ಹಿಂದಿರುಗಿಸಲಾಗುವುದು ಎಂದು ಹೊಳ್ಳ ಹೇಳಿದರು. ಕಳೆದ ತಿಂಗಳು ನ 17 ರಂದು ಜೆಡಿಎಸ್ ಸಮಾವೇಶ ಏರ್ಪಡಿಸಿದ್ದ ಸಂದರ್ಭದಲ್ಲಿ ಅನೇಕ ಸಮಸ್ಯೆಗಳು ಉಂಟಾಗಿದ್ದವು.
(ದಟ್ಸ್ ಕನ್ನಡ ವಾರ್ತೆ)