ಹೇಮಂತ್ ಕರ್ಕರೆಗೆ ಸಾಧ್ವಿಯ ಶಾಪ!
ದಾವಣಗೆರೆ, ನ. 4 : ಸಾಧ್ವಿ ಪ್ರಗ್ಯಾಸಿಂಗ್ ಹಾಗೂ ಲೆಫ್ಟಿನೆಂಟ್ ಪುರೋಹಿತ್ ಅವರ ಮೇಲೆ ಸುಳ್ಳು ಆರೋಪಪ ಹೊರಿಸಿದ ಶಾಪವೇ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಕರ್ಕರೆ ಸಾವಿಗೆ ಕಾರಣ ಎಂದು ಕರ್ನಾಟಕ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸನ್ಯಾಸಿನಿಗೆ ನೀಡಿದ ಚಿತ್ರಹಿಂಸೆ ಇಂದು ಅವರ ಸಾವಿನಲ್ಲಿ ಕೊನೆಯಾಗಿದೆ ಎಂದರು. ಸಾಧ್ವಿ ಪ್ರಗ್ಯಾಸಿಂಗ್ ಒಬ್ಬ ಅಮಾಯಕ ಸಾಧ್ವಿ. ಅವರ ಹೆಸರಿನಲ್ಲಿದ್ದ ಬೈಕ್ ತನಿಖೆಯ ವೇಳೆ ದೊರೆಯಿತು ಎನ್ನುವ ಕಾರಣಕ್ಕೆ ಅವರನ್ನು ಸಾಧ್ವಿ ಎನ್ನುವುದನ್ನು ಮರೆತು ಅವರನ್ನು ಬೆತ್ತಲೆ ಮಾಡಿ ಕಾಲುಗಳನ್ನು ಮೇಲಕ್ಕೆ ಕಟ್ಟಿ ತಲೆಯನ್ನು ಕೆಳಗೆ ಮಾಡಿ ನೀಡಿದ ಹಿಂಸೆ ಇದೆಯಲ್ಲ ಅದನ್ನು ಮನುಷ್ಯರು ಮಾಡುವುದಿಲ್ಲ ಎಂದು ನೊಂದರು ಮುತಾಲಿಕ್.
ಲೈಂಗಿಕ ಸಿಡಿಗಳನ್ನು ತೋರಿಸಿ ಸಾಧ್ವಿಯನ್ನು ಹೇಗಾದರೂ ಮಾಡಿ ಮಾಲೇಗಾಂವ್ ಸ್ಫೋಟದಲ್ಲಿ ಸಿಲುಕಿಸಬೇಕೆನ್ನುವ ಕರ್ಕರೆ ಕೃತ್ಯ ಹೀನಾಯ. ಅಮಾಯಕ ಸಾಧ್ವಿಗೆ ನೀಡಿದ ಹಿಂಸೆಗೆ ಅವರಿಗೆ ದೇವರೇ ಶಿಕ್ಷೆ ನೀಡಿದ್ದಾನೆ. ಇದು ಅವರ ಶಾಪ ಕೂಡಾ ಎಂದು ಅವರು ಹೇಳಿದರು.
ಲೆ. ಪುರೋಹಿತ್ ಸೇನಾಪಡೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ. ಅಂತಹ ವ್ಯಕ್ತಿ ವಿರುದ್ಧ ಭಯೋತ್ಪಾದನೆ ಪಟ್ಟ ಕಟ್ಟಿ ಜೈಲಿಗೆ ಎಳೆದೊಯ್ಯುವುದು ಯಾವ ನ್ಯಾಯ ಎಂದು ಆಕ್ರೋಷ ವ್ಯಕ್ತಪಡಿಸಿದ ಮುತಾಲಿಕ್, ಮಾಲೇಗಾಂವ್ ಸ್ಫೋಟಕ್ಕೂ ಈ ಇಬ್ಬರು ಅಮಾಯಕ ವ್ಯಕ್ತಿಗಳಿಗೂ ಯಾವುದೇ ಸಂಬಂಧವಿಲ್ಲ, ಇಬ್ಬರೂ 100ಕ್ಕೆ 100ರಷ್ಟು ಶುದ್ಧ ಹಸ್ತರು. ಖಂಡಿತವಾಗಿಯೂ ಅಗ್ನಿಪರೀಕ್ಷೆಯಲ್ಲಿ ನಿರ್ದೋಷಿಗಳಾಗಿ ಹೊರಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)