ಪೊಲೀಸರ ತೆಕ್ಕೆಗೆ ಮುತ್ತುಲಕ್ಷ್ಮಿ ವೀರಪ್ಪನ್
ಬೆಂಗಳೂರು, ನ. 26 : ಕುಖ್ಯಾತ ನರಹಂತಕ, ದಂತ ಚೋರ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿಯನ್ನು ಕರ್ನಾಟಕದ ಪೊಲೀಸರು ಬುಧವಾರ ಬೆಳಗಿನ ಜಾವ ಬಂಧಿಸಿದ್ದಾರೆ. ಗಂಡ ವೀರಪ್ಪನ್ ಜತೆ ಶಾಮೀಲಾಗಿ ಅನೇಕ ಅಪರಾಧಗಳನ್ನು ಎಸಗಿರುವ ಆರೋಪದ ಮೇಲೆ ಆಕೆಯನ್ನು ಕರ್ನಾಟಕ ತಮಿಳುನಾಡು ಗಡಿ ಭಾಗದ ಮೆಟ್ಟೂರು ಪ್ರದೇಶದಲ್ಲಿ ಪೋಲಿಸರು ಬೆಳಗಿನ ಜಾವ ಬಂಧಿಸಿದ್ದಾರೆ.
ತನ್ನ ಗಂಡ ನಡೆಸುತ್ತಿದ್ದ ಎಲ್ಲ ದುಶ್ಕೃತ್ಯಗಳಲ್ಲಿ ಭಾಗಿಯಾದದ್ದು, ಪಾಲಾರ್ ನಲ್ಲಿ 22 ಜನರ ಸಾವಿಗೆ ಕಾರಣವಾಗಿದ್ದ ಬಾಂಬ್ ಸ್ಪೋಟದಲ್ಲಿ ಪಾಲ್ಗೊಂಡದ್ದು ಮುಂತಾದ ಅನೇಕ ಆರೋಪಗಳು ಲಕ್ಷ್ಮಿ ಮೇಲಿವೆ. ಇಷ್ಟೆಲ್ಲ ಆರೋಪಗಳಿದ್ದರೂ ಯಾವುದೇ ಅಂಜಿಕೆ ಇಲ್ಲದೆ ಓಡಾಡುತ್ತಿದ್ದ ಮುತ್ತುಲಕ್ಷ್ಮಿಗೆ ವೀರಪ್ಪನ್ ಹತನಾದ ನಂತರ ತಕ್ಕ ಮಟ್ಟಿಗೆ ತಮಿಳು ಜನರ ಅನುಕಂಪ ಕೂಡ ಸಿಕ್ಕಿತ್ತು.
ಮುತ್ತುಲಕ್ಷ್ಮಿಯನ್ನು ಇಂದು ಮಧ್ಯಾನ್ಹ 12 ಗಂಟೆಗೆ ಚಾಮರಾಜನಗರ ಪೋಲಿಸ್ ಠಾಣೆಗೆ ಕರೆತರಲಾಯಿತು. ಆವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಆಕೆಯ ವಿರುದ್ಧದ ಅನೇಕ ಆರೋಪಗಳ ಬಗ್ಗೆ ವಿಚಾರಣೆ ನಡೆಸುತ್ತಿರುವ ಮೈಸೂರು ನ್ಯಾಯಾಲಯ ಆಕೆ ವಿರುದ್ಧ ಅನೇಕ ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದರೆ, ನಿಗದಿತ ದಿನಾಂಕ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ ಆಕೆಯನ್ನು ಅಂತಿಮವಾಗಿ ಪೊಲೀಸರು ಬಂಧಿಸಿ ಕೋರ್ಟಿಗೆ ಎಳೆದು ತರಬೇಕಾಯಿತು.
ಭಾರತೀಯ ದಂಡಸಂಹಿತೆ ಪ್ರಕಾರ ಮಹಿಳೆಯನ್ನು ಸಂಜೆ 6 ರಿಂದ ಬೆಳಗ್ಗೆ 6ರತನಕ ಬಂಧಿಸಬಾರದು ಮತ್ತು ಮಹಿಳೆಯನ್ನು ಬಂಧಿಸುವಾಗ ಮಹಿಳಾ ಪೊಲೀಸ್ ಸಿಬ್ಬಂದಿ ಇರಬೇಕು. ಆದರೆ, ಕರ್ನಾಟಕ ಪೊಲೀಸರು ಆಕೆಯನ್ನು ಸರಿರಾತ್ರಿಯಲ್ಲಿ ಬಂಧಿಸಿರುವುದರಿಂದ ನಿಯಮಗಳು ಉಲ್ಲಂಘನೆ ಆಗಿವೆ ಎಂದು ತಮಿಳು ಮಾಧ್ಯಮಗಳು ಸೊಲ್ಲೆತ್ತುವುದು ನಿರೀಕ್ಷಿತ.
(ದಟ್ಸ್ ಕನ್ನಡ ವಾರ್ತೆ)