ವರ್ತೂರು ಪ್ರಕಾಶ್ ವಿರುದ್ಧ ಬಿಜೆಪಿ ಆಕ್ರೋಶ
ಬೆಂಗಳೂರು, ನ. 24 : ಕೋಲಾರದ ಶಾಸಕ ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿ ಅಧ್ಯಕ್ಷ ವರ್ತೂರು ಪ್ರಕಾಶ್ ಅವರ ವರ್ತನೆಯ ಬಗ್ಗೆ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ, ಕೇವಲ ಆಸೆ ಆಮಿಷಗಳಿಗಾಗಿ ಬಿಜೆಪಿ ಸೇರಿರುವ ವ್ಯಕ್ತಿ. ಇವರನ್ನು ಬಿಜೆಪಿ ಮುಖಂಡರೂ ಇನ್ನೂ ನಂಬಿಲ್ಲ ಎಂದು ಹೇಳಿದರು.
ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಪ್ರತಿ ದಿನ ಮನಬಂದಂತೆ ನಿಂದನೆ ಮಾಡುತ್ತಿರುವ ವರ್ತೂರು ಪ್ರಕಾಶ್ ವಿರುದ್ದ ಇದೇ ಪ್ರಥಮ ಬಾರಿಗೆ ಧ್ವನಿ ಎತ್ತಿರುವ ಸದಾನಂದಗೌಡ, ಇವರ ವರ್ತನೆ ಮುಂದುವರೆದಲ್ಲಿ ಇವರ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ ಎಂದರು. ಇಂತಹ ವ್ಯಕ್ತಿ ಮಾಡುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಉತ್ತಮವಲ್ಲ, ಆದರೂ ಪಕ್ಷದ ಹಿರಿಯ ನಾಯಕರಿಗೆ ಆಗುತ್ತಿರುವ ಅವಮಾನವನ್ನು ನೋಡಿಕೊಂಡು ಸುಮ್ಮನೆ ಕೂರುವುದು ಸಾಧ್ಯವಿಲ್ಲ ಎಂದು ಹೇಳಿದರು. ಭಿನ್ನಾಭಿಪ್ರಾಯಗಳಿದ್ದರೆ ಬಗೆಹರಿಸಿಕೊಳ್ಳಬೇಕೆ ವಿನಃ ಬೀದಿಯಲ್ಲಿ ರಂಪಾಟ ಮಾಡುವುದು ಸರಿಯಲ್ಲ ಎಂದು ಸದಾನಂದಗೌಡ ತಿರುಗೇಟು ನೀಡಿದರು.
ಕನಕ ಜಯಂತಿ ನಂತರ ಈಶ್ವರಪ್ಪ ಅವರ ಮೇಲೆ ಶರಂಪರ ಟೀಕೆಗಳ ಸುರಿಮಳೆಗೈಯುತ್ತಿರುವ ವರ್ತೂರು ಪ್ರಕಾಶ್, ಇಂಧನ ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿದ್ದರು. ಕುರುಬ ಜಾತಿಗೆ ಅನ್ಯಾಯ ಮಾಡುತ್ತಿರುವ ವ್ಯಕ್ತಿಯನ್ನು ಕೂಡಲೇ ಸಂಪುಟದಿಂದ ಕೈಬಿಡದಿದ್ದರೆ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುವುದಾಗಿ ಬೆದರಿಕೆ ಮಾತಗಳನ್ನಾಡಿದ್ದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವರ್ತೂರು ಪ್ರಕಾಶ್, ಮಂಡಳಿಗೆ ಸಂಬಂಧಿಸಿದ ವಿಷಯವನ್ನು ಬಿಟ್ಟು ರಾಜಕೀಯಕ್ಕೆ ಹೆಚ್ಚು ಒತ್ತು ಕೊಟ್ಟು ಮಾತನಾಡಿದ್ದರು. ರಾಜ್ಯದ 80 ಲಕ್ಷ ಕುರುಬರನ್ನು ವಂಚಿಸಿರುವ ಈಶ್ವರಪ್ಪ ಅವರನ್ನು ಸಂಪುಟದಲ್ಲಿ ಇಟ್ಟಕೊಳ್ಳುವುದು ಸರ್ಕಾರಕ್ಕೆ ಕೆಟ್ಟ ಹೆಸರು. ನನ್ನ ಮಾತಿಗೆ ಮುಖ್ಯಮಂತ್ರಿಯವರು ಬೆಲೆ ಕೊಡದಿದ್ದರೆ ಬಿಜೆಪಿಗೆ ನೀಡಿರುವ ಬೆಂಬಲವನ್ನು ಹಿಂದಕ್ಕೆ ಪಡೆದುಕೊಳ್ಳುವುದಾಗಿ ಹೇಳಿದ್ದರು. ಶಿವಮೊಗ್ಗದಲ್ಲಿ ಬ್ರಾಹ್ಮಣರ ಮತಗಳು ಅಧಿಕ, ಹೀಗಾಗಿ ಜೀವನದುದ್ದಕ್ಕೊ ಬ್ರಾಹ್ಮಣರ ಒಲೈಕೆಯ ರಾಜಕೀಯ ಮಾಡಿಕೊಂಡು ಬಂದಿದ್ದಾರೆ ಎಂದು ಲೇವಡಿ ಮಾಡಿದ್ದರು. ಈ ಮೂಲಕ ಕುರುಬರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)