ಡಿ. 27 ರಂದು ಕರ್ನಾಟಕದಲ್ಲಿ ಉಪಚುನಾವಣೆ
ಬೆಂಗಳೂರು, ನ. 24 : ಆಪರೇಷನ್ ಕಮಲ ಹಾಗೂ ಶಾಸಕ ಸಿದ್ದರಾಜು ನಿಧನದಿಂದ ತೆರವಾಗಿರುವ ವಿಧಾನಸಭೆಯ ಸ್ಥಾನ ಎಂಟು ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಿಗೆ ಡಿಸೆಂಬರ್ 27 ರಂದು ಉಪಚುನಾವಣೆ ನಡೆಯಲಿದೆ.
ಚುನಾವಣಾ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ಚುನಾವಣಾ ನೀತಿ ಸಂಹಿತೆ ಭಾನುವಾರದಿಂದಲೇ ಜಾರಿಗೆ ಬಂದಿದ್ದು, ಉಪಚುನಾವಣೆಯ ಅಧಿಸೂಚನೆ ಡಿ 3 ರಂದು ಹೊರಬೀಳಲಿದೆ. ಇಂದಿನಿಂದಲೇ ನಾಮಪತ್ರ ಸಲ್ಲಿಕೆಯೂ ಆರಂಭವಾಗಲಿವೆ. ಡಿ 10 ರಂದು ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿದೆ. ಡಿ 11 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ಡಿ. 13 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಡಿ. 27ಕ್ಕೆ ಮತದಾನ ನಡೆಯಲಿದೆ. ಡಿ. 30 ರಂದು ಮತ ಏಣಿಕೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಮಾಜಿ ಸಚಿವ ಸಿ. ಚೆನ್ನಿಗಪ್ಪಅವರ ಪುತ್ರ ಗೌರಿಶಂಕರ ರಾಜೀನಾಮೆಯಿಂದ ತೆರವಾಗಿರುವ ಮಧುಗಿರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ಇರುವುದರಿಂದ, ಆ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಅಧ್ಯಕ್ಷ ಬಿ ವಿ ಕುಲಕರ್ಣಿ ತಿಳಿಸಿದ್ದಾರೆ. ಅರಭಾವಿ, ಹುಕ್ಕೇರಿ, ಕಾರವಾರ, ಮದ್ದೂರು, ದೊಡ್ಡಬಳ್ಳಾಪುರ, ತುರುವೇಕೆರ ಮತ್ತು ದೇವದುರ್ಗ ಕ್ಷೇತ್ರಗಳಲ್ಲಿ ಮರುಚುನಾವಣೆ ನಡೆಯಲಿದೆ.
(ದಟ್ಸ್ ಕನ್ನಡ ವಾರ್ತೆ)