ರಾಜ್ಯದಲ್ಲಿ ಸಂಜೆ ನ್ಯಾಯಾಲಯ ಸ್ಥಾಪನೆಗೆ ಸಲಹೆ
ಬೆಂಗಳೂರು,ನ.23: ವಿವಿಧ ಕೋರ್ಟ್ ಗಳಲ್ಲಿನ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಸಂಜೆ ನ್ಯಾಯಾಲಯಗಳನ್ನು ಸ್ಥಾಪಿಸುವ ಅಗತ್ಯ ಇದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ.ಕೆ.ಜಿ.ಬಾಲಕೃಷ್ಣನ್ ಸಲಹೆ ನೀಡಿದರು.
ಮುಖ್ಯವಾಗಿ ಬೃಹತ್ ನಗರಗಳಿರುವ ಕಡೆ ಸಂಜೆ ಕೋರ್ಟ್ ಆರಂಭಿಸಬೇಕೆಂಬ ಮುಖ್ಯ ನ್ಯಾಯಮೂರ್ತಿಗಳ ಸಲಹೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಕ್ಷಣ ಸ್ಪಂದಿಸಿ, ಸಂಜೆ ಕೋರ್ಟ್ ಗಳ ಸ್ಥಾಪನೆಗೆ ಅಗತ್ಯ ಸಂಪನ್ಮೂಲ ಹಾಗೂ ಸೌಲಭ್ಯಗಳನ್ನು ಒಸಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.ಸಣ್ಣಪುಟ್ಟ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಹೈಕೋರ್ಟ್ ನಲ್ಲಿ ರೂಪಿಸಲಾದ 'ವಿಡಿಯೋ ಕಾನ್ಫರೆನ್ಸ್ ' ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು. ಇದೊಂದು ಐತಿಹಾಸಿಕ ಯೋಜನೆ ಎಂದು ಶ್ಲಾಘಿಸಿದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅರಿಜಿತ್ ಪಸಾಯತ್, ಆರ್.ವಿ.ರವೀಂದ್ರನ್ ಮಾತನಾಡುತ್ತಾ, ಸಣ್ಣಪುಟ್ಟ ಪ್ರಕರಣಗಳು ಇತ್ಯರ್ಥವಾಗದೆ ನ್ಯಾಯದಾನ ವಿಳಂಬವಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ನ್ಯಾಯಾಧೀಶರು ನ್ಯಾಯಾಲಯದಲ್ಲಿ ವೈಜ್ಞಾನಿಕ ವಿಧಾನದಲ್ಲಿ ಹೊಸಹೊಸ ಆಯಾಮಗಳನ್ನು ಕಂಡುಕೊಳ್ಳುವ ಅಗತ್ಯ ವಿದೆ ಎಂದರು. ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಸ್.ಆರ್.ಬನ್ನೂರು ಮಠ, ವಿ.ಗೋಪಾಲಗೌಡ ಮುಂತಾದವರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)