ಚಿಕ್ಕಮಗಳೂರಿನಲ್ಲಿ ಮೂವರು ನಕ್ಸಲರ ಹತ್ಯೆ
ಚಿಕ್ಕಮಗಳೂರು, ನ. 19 : ಮಂಗಳವಾರ ರಾತ್ರಿಯಿಂದಲೇ ಕಳಸಾ-ಹೊರನಾಡು ಬಳಿಯ ಮಾವಿನಹೊಲ ಅರಣ್ಯ ಪ್ರದೇಶದಲ್ಲಿ ನಕ್ಸಲರು ಹಾಗೂ ನಕ್ಸಲ್ ನಿಗ್ರಹ ಪಡೆ ಪೊಲೀಸರೊಂದಿಗೆ ಗುಂಡಿನ ಚಕಮಕಿ ಮುಂದುವರೆದಿದೆ. ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಮೂವರು ನಕ್ಸಲರನ್ನು ಹತ್ಯೆಗೈಯಲಾಗಿದೆ. ಮಹಿಳಾ ನಕ್ಸಲ್ ಒಬ್ಬಳು ಪರಾರಿಯಾಗಿರುವ ಘಟನೆ ಜರುಗಿದೆ. ನಕ್ಸಲರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಸೊರಬದ ನವೀನ, ರಾಯಚೂರಿನ ವೆಂಕಟೇಶ್ ಹಾಗೂ ಮನೋಹರ ಮೃತಪಟ್ಟಿರುವ ನಕ್ಸಲರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ಪೇದೆ ಗುರುಪ್ರಸಾದ್ ಮೃತರಾಗಿದ್ದು, ಅವರ ಕುಟುಂಬಕ್ಕೆ ಸರ್ಕಾರ 5 ಲಕ್ಷ ರು ಪರಿಹಾರ ಧನ ಘೋಷಿಸಲಾಗಿದೆ. ಕನ್ಯಾಕುಮಾರಿ ಪರಾರಿಯಾಗಿರುವ ಮಹಿಳಾ ನಕ್ಸಲ್ ಅಗಿದ್ದಾಳೆ ಎಂದು ಐಜಿಪಿ ಎ. ಎಂ ಪ್ರಸಾದ್ ತಿಳಿಸಿದ್ದಾರೆ. ನಕ್ಸಲರಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ನಕ್ಸಲ್ ನಿಗ್ರಹ ಪಡೆ ವ್ಯಾಪಕ ಜಾಲ ಬೀಸಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ಕಾರ್ಯಾಚರಣೆ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ನಕ್ಸಲ್ ಎನ್ ಕೌಂಟರ್ ನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಗತ್ಯತೆಯನ್ನು ತಿಳಿದುಕೊಂಡು ಹೆಚ್ಚಿನ ಪೊಲೀಸ್ ಪಡೆ ರವಾನಿಸಲು ಆದೇಶ ನೀಡಲಾಗುವುದು ಎಂದು ಹೇಳಿದ್ದಾರೆ. ಘಟನೆ ಕುರಿತು ಶೀಘ್ರದಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಚರ್ಚೆ: ಮಲ್ನಾಡಿನ ನಕ್ಸಲ್ ಪಿಡುಗಿಗೆ ಸ್ವಾಮೀಜಿಗಳಿಂದ ಪರಿಹಾರ?