ಪ್ರಸಕ್ತ ವರ್ಷದಿಂದ ಕನಕದಾಸ ಪ್ರಶಸ್ತಿ: ಬಿಎಸ್ ವೈ
ಬೆಂಗಳೂರು, ನ.15: ವಿಧಾನಸೌಧದ ಮುಂಭಾಗದಲ್ಲಿ ದಾಸಶ್ರೇಷ್ಠ ಕವಿ ಕನಕದಾಸರ 521ನೇ ಜಯಂತಿ ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೂತನ ಕೊಡುಗೆಗಳನ್ನು ಶನಿವಾರ ಪ್ರಕಟಿಸಿದ್ದಾರೆ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅಲೆಮಾರಿ ಜನಾಂಗಕ್ಕಾಗಿ ವಸತಿ ಶಾಲೆಗಳ ಸ್ಥಾಪನೆ, ಕನಕದಾಸ ಪ್ರಶಸ್ತಿ, ವಿಶ್ವವಿದ್ಯಾಲಯದಲ್ಲಿ ಕನಕ ಅಧ್ಯಯನ ಪೀಠ ಸ್ಥಾಪನೆಗೆ ತಲಾ ರು.1ಕೋಟಿ ಪ್ರಕಟಿಸಿದರು. ಹಾಗೆಯೇ ಕನಕ ಸಾಹಿತ್ಯ ಪ್ರಕಟಣೆಗೆ 1ಕೋಟಿ ರು. ಹಾಗೂ ಇದರ ನಿರ್ವಹಣೆಗೆ ತಜ್ಞರ ಸಮಿತಿ ರಚಿಸಲಾಗುವುದು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ದೊರಕಿದ ಸಲುವಾಗಿ ನ.30ರಂದು ವಿಧಾನಸೌಧದ ಮುಂಭಾಗದಲ್ಲಿ ಅದ್ದೂರಿ ಸಮಾರಂಭ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಇಂದು ಕುರಿಗಾರರು ಪ್ರಕೃತಿ ವಿಕೋಪಕ್ಕೆ ಸಿಕ್ಕಿ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಇವರ ಅಭಿವೃದ್ದಿ ಹೇಗೆ ನೆರವಾಗಬಹುದು ಎಂಬುದನ್ನು ತಜ್ಞರ ಸಮಿತಿ ವರದಿ ನೀಡಬೇಕು ಎಂದು ಸೂಚಿಸಿದರು. ಉತ್ತರ ಕರ್ನಾಟದಲ್ಲಿರುವ ಅಲೆಮಾರಿಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆಗಳನ್ನು ಆರಂಭಿಸುವುದಾಗಿ ಪ್ರಕಟಿಸಿದರು. ಮುಂದಿನ ಶೈಕ್ಷಣಿಕ ವರ್ಷದಿಂದ ವಸತಿ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂದು ಭರವಸೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)