ನಿವೃತ್ತ ಲೋಕಾಯುಕ್ತ ವೆಂಕಟಾಚಲ ಬಿಜೆಪಿಗೆ?
ಬೆಂಗಳೂರು, ನ. 15 : ಅಪರೇಷನ್ ಕಮಲವನ್ನು ಮುಂದುವರೆಸಿರುವ ಬಿಜೆಪಿ ನಾಯಕರು ಭ್ರಷ್ಟರಿಗೆ ಸಿಂಹಸ್ವಪ್ನರಾಗಿದ್ದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರ ಮೇಲೆ 'ಆಪರೇಶನ್ ಕಮಲ' ಕಾರ್ಯಾಚರಣೆ ನಡೆದಿದೆ. ಹಾಗೆಯೇ ಶೀಘ್ರದಲ್ಲೇ ಮಂಡ್ಯ ಹಾಗೂ ಕೋಲಾರ ಜೆಡಿಎಸ್- ಕಾಂಗ್ರೆಸ್ ಪಕ್ಷಗಳ ಪ್ರಭಾವಿ ಮುಖಂಡರು ಬಿಜೆಪಿ ಸೇರಲಿದ್ದಾರೆ.
ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ನೆಲೆಯನ್ನು ಭದ್ರಪಡಿಸುವ ದೃಷ್ಟಿಯಿಂದ ಅನ್ಯ ಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಸೆಳೆಯುವ ಕಾಯಕವನ್ನು ಮುಂದುವರಿಸಿರುವ ಬಿಜೆಪಿ ಮುಖಂಡರು ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಭಾರಿ ಪೆಟ್ಟು ನೀಡಲು ಸಿದ್ಧತೆ ನಡೆಸಿದ್ದಾರೆ. ಮುಂಬರುವ ಲೋಕಸಭೆ ಮತ್ತು ಉಪಚುನಾವಣೆಗಳು ಬಿಜೆಪಿ ಸರ್ಕಾರಕ್ಕೆ ಭಾರಿ ಪ್ರತಿಷ್ಟೆ ಪ್ರಶ್ನೆಯಾಗಿರುವ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಅನ್ಯ ಪಕ್ಷಗಳ ನಾಯಕರನ್ನು ಸೆಳೆದುಕೊಂಡು ಚುನಾವಣೆಯಲ್ಲಿ ಮೇಲುಗೈ ಸಾಧಿಸುವುದು ಬಿಜೆಪಿಯ ಏಕೈಕ ಗುರಿಯಾಗಿದೆ.
ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿ ಯಾರೇ ಪಕ್ಷಕ್ಕೆ ಬಂದರೂ ಬಿಜೆಪಿ ಅವರನ್ನು ಸ್ವಾಗತಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ ಪುನರುಚ್ಚರಿಸಿದ್ದಾರೆ. ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. ಬೆಳೆಯುವ ಪಕ್ಷವಾಗಿದ್ದರಿಂದ ಸೇರ್ಪಡೆ ಕೆಲಸ ಮುಂದುವರೆಯಲಿದೆ ಎಂದು ಅವರು ಆಪರೇಷನ್ ಕಮಲವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೊಲನೆಗಾಗಿ ಸಾಕಷ್ಟು ಹೋರಾಟ ನಡೆಸಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್ ವೆಂಕಟಾಚಲ ಬಿಜೆಪಿ ಸೇರಿಕೊಳ್ಳಲು ಸಮ್ಮತಿಸಿದ್ದಾರೆ. ಈಗಾಗಲೇ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರಿಂದ ಸಕಾರತ್ಮಕ ಉತ್ತರ ಬಂದಿದೆ. ಈ ಹಿನ್ನೆಲೆಯಲ್ಲಿ ವೆಂಕಟಾಚಲ ಶೀಘ್ರ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಸದಾನಂದಗೌಡ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications