ಮಾಲೇಗಾಂವ್ ಸ್ಫೋಟದ ಹಿಂದೆ ಸೇನಾಧಿಕಾರಿ
ಮುಂಬೈ, ನ. 7 : ಕಳೆದ ತಿಂಗಳು ಮಾಲೇಗಾಂವ್ ನಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಿವೃತ್ತ ಸೇನಾಧಿಕಾರಿ ಶ್ರೀಕಾಂತ್ ಪ್ರಸಾದ ಪುರೋಹಿತ ಮಾಲೇಗಾಂವ್ ನಲ್ಲಿ ಸರಣಿ ಸ್ಫೋಟಕ್ಕೆ ಸಂಚು ರೂಪಿಸಿರುವುದು ನಾನೇ ಎಂದು ಗುರುವಾರ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.
ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ಪಡೆ ಪೊಲೀಸರು ಈ ವಿಷಯವನ್ನು ಬಹಿರಂಗಪಡಿಸಿದ್ದು, ನಾಸಿಕ್ ನ್ಯಾಯಾಲಯ ನಡೆಸಿದ ವಿಚಾರಣೆ ವೇಳೆಯಲ್ಲಿ ಶ್ರೀಕಾಂತ್ ಪುರೋಹಿತ ಘಟನೆಯ ಕುರಿತಂತೆ ಸಂಪೂರ್ಣ ವಿವರ ನೀಡಿದರು. ಮಾಲೇಗಾಂವ್ ಸ್ಫೋಟದ ಸಂಚು ರೂಪಿಸಿರುವುದಲ್ಲದೇ ಸ್ಫೋಟಕ್ಕೆ ಆರ್ ಡಿಎಕ್ಸ್ ನಂತಹ ಸ್ಫೋಟಕ ಸಾಮಗ್ರಿಗಳನ್ನು ಸರಬರಾಜು ಮಾಡಿರುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ಸಾಕಷ್ಟು ಆರ್ಥಿಕವಾಗಿ ಸಹಾಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಇನ್ನು ಅನೇಕ ಕೈವಾಡವಿದೆ, ಶೀಘ್ರದಲ್ಲಿ ಬಂಧಿಸುವುದಾಗಿಎಟಿಎಸ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪುರೋಹಿತ ಆಪ್ತರು ಎನ್ನುವ ಸೇನಾಪಡೆಯ ಇನ್ನಷ್ಟು ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ನಾಸಿಕ್ ನ್ಯಾಯಲಯದ ಸೂಚನೆಯ ಮೇರೆಗೆ ನ. 6 ರಂದು ಪುರೋಹಿತ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗಿತ್ತು. ನಾಸಿಕ್ ನ್ಯಾಯಾಲಯ ಈಗಾಗಲೇ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಪುರೋಹಿತ ಅವರನ್ನು ನ. 7 ಮತ್ತು 8 ರಂದು ನಾರ್ಕೋ ಅನಾಲೀಸಸ್ ಪರೀಕ್ಷೆ ಒಳಪಡಿಸಲಾಗುವುದು ಎಂದು ಎಟಿಎಸ್ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿರುವ ಪೊಲೀಸರು, ವಿಚಾರಣೆಯ ವಿವರವನ್ನು ಬಹಿರಂಗಪಡಿಸಿಲ್ಲ. ಕಳೆದ ಸೆಪ್ಟೆಂಬರ್ 29 ರಂದು ಮಾಲೇಗಾಂವ್ ನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 6 ಮಂದಿ ಮೃತಪಟ್ಟು, 30ಕ್ಕೊ ಹೆಚ್ಚು ಜನರು ಗಾಯಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)