ಬಿಹಾರದ ಐದು ಸಂಸದರು ರಾಜೀನಾಮೆ
ನವದೆಹಲಿ, ನ. 7 : ಮುಂಬೈನಲ್ಲಿ ನಡೆದ ಬೆಸ್ಟ್ ಬಸ್ಸಿನ ಶೂಟೌಟ್ ಪ್ರಕರಣವನ್ನು ಖಂಡಿಸಿ ಬಿಹಾರದ ಜೆಡಿಯು ಪಕ್ಷದ ಐದು ಸಂಸದರು ತಮ್ಮ ಸಂಸತ್ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ಉತ್ತರ ಭಾರತೀಯರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ತಡೆಯಬೇಕು ಹಾಗೂ ಮಹಾರಾಷ್ಟ್ರ ನವನಿರ್ಮಾಣ ವೇದಿಕೆ (ಎಂಎನ್ಎಸ್) ಮುಖಂಡ ರಾಜ್ ಠಾಕ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವುದು ರಾಜೀನಾಮೆ ನೀಡಿರುವ ಸಂಸದರ ಒತ್ತಾಯವಾಗಿದೆ.
ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್, ಪ್ರಭುನಾಥ್ ಸಿಂಗ್, ರಾಜೀವ ರಂಜನ್ ಸಿಂಗ್ ಲಲ್ಲನ್, ಕೈಲಾಶ್ ಬೈತಾ ಹಾಗೂ ಮೀನಾ ಸಿಂಗ್ ರಾಜೀನಾಮೆ ನೀಡಿರುವ ಸಂಸದರಾಗಿದ್ದಾರೆ. ಉತ್ತರ ಭಾರತೀಯರ ವಿರುದ್ಧ ದಾಳಿ ನಡೆಸುತ್ತಿರುವವರನ್ನ ಮಹಾರಾಷ್ಟ್ರ ಸರಕಾರ ಬೆ೦ಬಲಿಸುತ್ತಿದೆ ಹಾಗೂ ಕೇಂದ್ರದ ಯಪಿಎ ಸರಕಾರ ಈ ಕುರಿತು ಮೌನಕ್ಕೆ ಶರಣಾಗಿರುವುದು ನಮ್ಮ ಈ ನಿಲುವಿಗೆ ಕಾರಣ ಎಂದು ನಿತೀಶ್ ಕುಮಾರ್ ನವದೆಹಲಿಯಲ್ಲಿ ತಿಳಿಸಿದ್ದಾರೆ. ನಮ್ಮ ಸಂಸದರ ನಿಯೋಗವು ಪ್ರಧಾನಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಈ ಬಗ್ಗೆ ಅಪರಾಧಿಗಳ ವಿರುದ್ಧ ಯಾವುದೇ ಕ್ರಮ ಈ ವರೆಗೆ ತೆಗೆದುಕೊಳ್ಳದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಮುಂಬೈಯಲ್ಲಿ ಉತ್ತರ ಭಾರತೀಯ ಹಾವಳಿ ಹೆಚ್ಚಿರುವ ಜೊತೆಗೆ ರೈಲ್ವೆ ಇಲಾಖೆಯಲ್ಲಿ ಬರೀ ಉತ್ತರ ಭಾರತೀಯರನ್ನೆ ನೇಮಕ ಮಾಡಿಕೊಳ್ಳತ್ತಿದ್ದಾರೆ ಎಂದು ಆರೋಪಿಸಿ ಎಂಎನ್ಎಸ್ ಕಾರ್ಯಕರ್ತರು ರೈಲ್ವೆ ನೇಮಕಾತಿಯ ಪರೀಕ್ಷೆ ಕೇಂದ್ರಕ್ಕೆ ತೆರಳಿ ದಾಂಧಲೆ ನಡೆಸಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ ಠಾಕ್ರೆ ಅವರನ್ನು ಪ್ರಕರಣದ ಹೊಣೆಗಾರರನ್ನಾಗಿಸಿ ಮುಂಬೈ ಪೊಲೀಸರು ಅವರನ್ನು ಬಂಧಿಸಿ ಜೈಲಿಗೆ ಹಾಕಿದ್ದರು. ಠಾಕ್ರೆ ಬಂಧನದಿಂದ ಮಹಾರಾಷ್ಟ್ರದಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು. ನಿಷೇಧಾಜ್ಞೆ, ಗೋಲಿಬಾರ್ ನಡೆದು ಹಿಂಸಾಚಾರ ತಲೆದೋರಿತ್ತು.
ಇದರಿಂದ ರೊಚ್ಚಿಗೆದ್ದ ಮರಾಠಿಗಳು ಕಂಡಕಂಡಲ್ಲಿ ಉತ್ತರ ಭಾರತೀಯ ದಾಳಿ, ಹಲ್ಲೆ ನಡೆಸತೊಡಗಿದರು. ಅದರ ಭಾಗಿವಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಧರ್ಮದೇವ್ ರೈ ಎಂಬಾತನನ್ನು ಹತ್ಯೆ ಮಾಡಿದ್ದರು. ಇದರಿಂದ ಕೆರಳಿದ ಬಿಹಾರಿಗಳು ಪ್ರತಿಯಾಗಿ ಪ್ರತಿಭಟನೆ ನಡೆಸಿದ್ದರು. ರಾಹುಲ್ ರಾಜ್ ಎಂಬ ಬಿಹಾರಿ ಯುವಕ ಮುಂಬೈನಲ್ಲಿ ಬೆಸ್ಟ್ ಎಂಬ ಹೆಸರಿನ ಬಸ್ ನ್ನು ಅಪಹರಣ ಮಾಡಲು ವಿಫಲನಾಗಿ ಬಸ್ಸಿನ ಡ್ರೈವರ್ ಹಾಗೂ ಪ್ರಯಾಣಿಕರ ಮೇಲೆ ಗುಂಡಿನ ಸುರಿಮಳೆಗೈದಿದ್ದ. ಆಗ ಬಸ್ಸಿನ ಡ್ರೈವರ್ ಜೀವನ್ಮರಣದಲ್ಲಿ ಹೋರಾಟ ನಡೆಸಿದ್ದ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮನವೊಲಿಸಲು ವಿಫಲರಾಗಿ ಕೊನೆಯದಾಗಿ ರಾಹುಲ್ ರಾಜ್ ಶೂಟೌಟ್ ಮೂಲಕ ಹತ್ಯೆ ಮಾಡಿದ್ದರು. ಇದನ್ನು ಖಂಡಿಸಿ ಇಂದು ಬಿಹಾರದ ಎಂಪಿ ಗಳು ರಾಜೀನಾಮೆ ನೀಡಿದ್ದಾರೆ. (ದಟ್ಸ್ ಕನ್ನಡ ವಾರ್ತೆ)