ನಾಡೋಜ ಪಾಪುಗೆ ನೃಪತುಂಗ ಪ್ರಶಸ್ತಿ
ಬೆಂಗಳೂರು, ಅ. 31 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೃಪತುಂಗ ಪ್ರಶಸ್ತಿಗೆ ಈ ಬಾರಿ ಹಿರಿಯ ಪತ್ರಕರ್ತ, ನಾಡೋಜ ಡಾ. ಪಾಟೀಲ್ ಪುಟ್ಟಪ್ಪ ಆಯ್ಕೆಯಾಗಿದ್ದಾರೆ. ಬಿಎಂಟಿಸಿ ಸಂಸ್ಥೆಯ ದತ್ತಿ ನಿಧಿಯಿಂದ ಪ್ರಶಸ್ತಿಯ ಮೊತ್ತವನ್ನು ನೀಡಲಾಗುತ್ತಿದ್ದು, ಪ್ರಶಸ್ತಿಯೂ 5 ಲಕ್ಷದ 1 ರುಪಾಯಿ ಹಾಗೂ ಫಲಕಗಳನ್ನು ಒಳಗೊಂಡಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಈ ವಿಷಯ ಪ್ರಕಟಿಸಿದರು. ಪ್ರಶಸ್ತಿ ಪ್ರದಾನ ದಿನಾಂಕವನ್ನು ಇನ್ನು ನಿಗದಿಪಡಿಸಿಲ್ಲ. ಕಳೆದ ಬಾರಿ ದೇ.ಜವರೇಗೌಡ ಪ್ರಶಸ್ತಿ ಇವರಿಗೆ ಲಭಿಸಿತ್ತು ಎಂದು ಅವರು ತಿಳಿಸಿದರು. ನೃಪತುಂಗ ಕನ್ನಡ ನಾಡಿನ ಹೆಮ್ಮೆಯ ಚಕ್ರವರ್ತಿ ಹನ್ನೆರಡನೇ ಶತಮಾನದಲ್ಲಿ ಕನ್ನಡದ ಕವಿರಾಜಮಾರ್ಗ ಕೃತಿ ರಚಿಸಿ ಕನ್ನಡ ಭಾಷೆಯನ್ನು ಎತ್ತಿ ತೋರಿಸಿದ್ದಾನೆ. ಕಾವೇರಿಯಿಂದ ಗೋದಾವರಿವರೆಗೆ ಈ ನಾಡು ಹಬ್ಬಿತ್ತು ಎಂದು ಮೊದಲ ಬಾರಿಗೆ ಹೇಳಿದ್ದಾನೆ. ಇಂಥ ನೃಪತುಂಗನ ಹೆಸರಿನಲ್ಲಿರುವ ಪ್ರಶಸ್ತಿ ನನಗೆ ಬಂದಿರುವುದು ಸಂತಸದ ವಿಚಾರವಾಗಿದೆ ಎಂದು ಪುಟ್ಟಪ್ಪ ಭಾವುಕರಾಗಿ ತಮ್ಮ ಮನದಾಳದ ಇಂಗಿತವನ್ನು ತಿಳಿಸಿದ್ದಾರೆ.
ಈ ನಾಡಿನಲ್ಲಿ ನನಗಿಂತ ಹಿರಿಯರು, ಅರ್ಹರು ಸಾಕಷ್ಟು ಜನ ಇದ್ದಾಗಲೂ ಪ್ರಶಸ್ತಿ ನನಗೆ ಸಂದಿರುವುದು, ನನ್ನ ಮೇಲೆ ಇನ್ನಷ್ಟು ಜವಾಬ್ದಾರಿ, ಕನ್ನಡ ಬಗೆಗಿನ ಕಾಳಜಿ ಇನ್ನಷ್ಟು ಹೆಚ್ಚಿದಂತಾಗಿದೆ ಎಂದು ಪುಟ್ಟಪ್ಪ ಸಂತೋಷ ವ್ಯಕ್ತಪಡಿಸಿದರು. ಹಾವೇರಿ ಜಿಲ್ಲೆಯ ಕುರುಬಗೊಂಡ ಪುಟ್ಟಪ್ಪ ಅವರು ಹುಟ್ಟೂರು, 1921ರಲ್ಲಿ ಜನನವಾಯಿತು. ಧಾರವಾಡದಲ್ಲಿ ಶಾಲೆ, ಪ್ರೌಢ, ಪದವಿ ಹಾಗೂ ಕಾನೂನು ಪದವಿ ಮುಗಿಸಿದ್ದಾರೆ. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕ್ಯಾಲಿಪೋರ್ನಿಯಾಕ್ಕೆ ತೆರಳಿ, ಎಂಎಸ್ ಸಿ ಪತ್ರಿಕೋಧ್ಯಮ ಸ್ನಾತಕೋತ್ತರ ಪದವಿ ಪಡೆದುಕೊಂಡರು. ನಂತರ ಪ್ರಪಂಚ, ವಿಶಾಲ ಕರ್ನಾಟಕ ಪತ್ರಿಕೆ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)