ಸುರಕ್ಷಿತವಲ್ಲದ ರಾಜ್ಯಗಳಲ್ಲಿ ರೈಲು ಸಂಚಾರ ರದ್ದು?
ನವದೆಹಲಿ, ಅ. 30 : ಸುರಕ್ಷಿತವಲ್ಲದ ರಾಜ್ಯಗಳಲ್ಲಿ ಸಂಚರಿಸುವ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಚಿಂತನೆ ನಡೆಸಲಾಗಿದೆ.ರೈಲಿನ ಆಸ್ತಿಗೆ ದಕ್ಕೆ ಉಂಟು ಮಾಡುವುದು ಅಥವಾ ಪ್ರಯಾಣಿಕರ ಮೇಲೆ ಹಲ್ಲೆ ಮಾಡುವುದು ಇಂಥ ಅಹಿತಕರ ಘಟನೆಗಳು ಪದೆಪದೇ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಕೇಂದ್ರದ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಎಚ್ಚರಿಸಿದ್ದಾರೆ.
ಬುಧವಾರ ಸಂಜೆ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅಹಿತಕರ ಘಟನೆಗಳು ನಿಯಂತ್ರಣಕ್ಕೆ ಬರುವವರೆಗೂ ರೈಲು ಸಂಚಾರವನ್ನು ರದ್ದುಗೊಳಿಸಲಾಗುವುದು. ಆದರೆ ಯಾವುದೇ ರಾಜ್ಯವನ್ನು ಉದ್ದೇಶಿಸಿ ನೇರವಾಗಿ ಈ ಮಾತನ್ನು ಅವರು ಹೇಳದಿದ್ದರೂ, ರೈಲಿನ ಆಸ್ತಿ ಪಾಸ್ತಿಗೆ ಯಾವುದೇ ನಷ್ಟ ಉಂಟು ಮಾಡಿದರೂ ಅದನ್ನು ಸಹಿಸಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಮಹಾರಾಷ್ಟ್ರ ನವನಿರ್ಮಾಣ ವೇದಿಕೆಗೆ ತೀಕ್ಷ್ಣವಾಗಿ ಉತ್ತರಿಸಿದ್ದಾರೆ. ಈ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಜೊತೆಗೆ ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂಬೈನ ಮೆಟ್ರೋ ಲೈಲಿನಲ್ಲಿ ನಡೆದ ಜಗಳದಲ್ಲಿ ಉತ್ತರ ಪ್ರದೇಶದ ಯುವಕನನ್ನು ಹತ್ಯೆ ಮಾಡಿರುವ ಘಟನೆಗೆ ಕೇಂದ್ರ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ಘಟನೆಗಳು ನಡೆಯದಂತೆ ಆಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಕೇಂದ್ರ ಸ್ಪಷ್ಟವಾದ ಸೂಚನೆ ನೀಡಿದೆ.
(ಏಜೆನ್ಸೀಸ್)