ಆಸ್ಸಾಂ ಬಾಂಬ್ ಸ್ಫೋಟದಲ್ಲಿ ಸತ್ತವರು 32
ಗೌಹಾತಿ, ಅ. 30 : ನಗರದ ವಿವಿಧ ಐದು ಕಡೆ ಹಾಗೂ ಅಸ್ಸಾಂ ಉತ್ತರ ಭಾಗದ ಆರು ಕಡೆಗೆ ಪ್ರಬಲ ಸರಣಿ ಬಾಂಬ್ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ 32 ಮಂದಿ ಮೃತಪಟ್ಟಿದ್ದು, 75ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಘಟನೆಯ ಹಿಂದೆ ಉಲ್ಫಾ ಉಗ್ರ ಸಂಘಟನೆ ಕೈವಾಡವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ನಗರದ ಜನನಿಬಿಡ ಪ್ರದೇಶಗಳಾದ ಪಾನ್ ಬಜಾರ್, ದಿಸ್ಪುರ್ ರಸ್ತೆ, ಪ್ಯಾನ್ಸಿ ರಸ್ತೆ, ಗಣೇಶ್ ಗುರಿ ಮೇಲ್ಸೇತುವೆ ಹಾಗೂ ನಗರದ ಜಿಲ್ಲಾಧಿಕಾರಿ ನ್ಯಾಯಾಲಯದ ಬಳಿ ಹಾಗೂ ಆಸ್ಸಾಂನ ಉತ್ತರ ಭಾಗದ ಬಾರಾಪೇಟೆಯಲ್ಲಿ ಎರಡು, ಬೊಂಗೈಗಾಂವ್ ನಲ್ಲಿ ಒಂದು, ಕೋಕ್ರಜಾರ್ ನಲ್ಲಿ ಮೂರು ಬಾಂಬ್ ಗಳು ಸ್ಫೋಟಗೊಂಡಿವೆ. ಸ್ಫೋಟದಲ್ಲಿ ಒಟ್ಟು 32 ಮಂದಿ ಸಾವನ್ನಪ್ಪಿದ್ದನ್ನು ಪೊಲೀಸರು ದೃಢಪಡಿಸಿದ್ದಾರೆ. 75ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಗೌಹಾತಿ ಡಿಐಜಿ ಎನ್.ಐ.ಹುಸೇನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ನಗರದ ಮೇಲ್ಸೇತುವೆ ಬಳಿ ಮುಖ್ಯಮಂತ್ರಿ ತರುಣ್ ಗೋಗೊಯ್ ತೆರಳುತ್ತಿದ್ದ ಕಾರ್ ನಿಂದ 100 ಮೀ ದೂರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಫೋಟ ಕೃತ್ಯಕ್ಕೆ ಕಾರು, ಬೈಕು, ಹಾಗೂ ಸೈಕಲ್ ಗಳನ್ನು ಬಳಸಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ. ಕೊಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ. ರಾಜ್ಯಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಕೇಂದ್ರದಿಂದ ಹೆಚ್ಚುವರಿ ಪೊಲೀಸ್ ಪಡೆಗೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ. ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ಭರದಿಂದ ಸಾಗಿದೆ. ಸ್ಫೋಟ ಕೃತ್ಯಕ್ಕೆ ಸಾರ್ವಜನಿಕವಾಗಿ ಭಾರಿ ಆಕ್ರೋಶ, ಖಂಡನೆ ವ್ಯಕ್ತವಾಗಿದೆ. ಸಾರ್ವಜನಿಕರು ಶಾಂತಿ ಸಮಾಧಾನ ಕಾಪಾಡಬೇಕು ಎಂದು ಮುಖ್ಯಮಂತ್ರಿ ತರುಣ್ ಗೋಗೊಯ್ ಮನವಿ ಮಾಡಿದ್ದಾರೆ.
ಸ್ಫೋಟ ಕೃತ್ಯಕ್ಕೆ ಆಸ್ಸಾಂ ಮುಖ್ಯಮಂತ್ರಿ ತರುಣ್ ಗೋಗೊಯ್, ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಎಐಸಿಸಿ ಮುಖ್ಯಸ್ಥೆ ಸೋನಿಯಾಗಾಂಧಿ, ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ತೀವ್ರವಾಗಿ ಖಂಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಭೀಕರ ಸರಣಿ ಬಾಂಬ್ ಸ್ಫೋಟಕ್ಕೆ ಆಸ್ಸಾಂ ತತ್ತರ












Click it and Unblock the Notifications