ತಲಕಾವೇರಿ ಮಂದಿರಕ್ಕೆ ದಾಖಲೆ ಪ್ರಮಾಣದ ಕಾಣಿಕೆ
ಮಡಿಕೇರಿ, ಅ.25: ಅಕ್ಟೋಬರ್ 17ರಂದು ತೀರ್ಥೋದ್ಭವ ವೀಕ್ಷಿಸಲು ತಲಕಾವೇರಿಗೆ ಅತ್ಯಧಿಕ ಯಾತ್ರಿಗಳು ಭೇಟಿ ಕೊಟ್ಟಿದ್ದ್ದು ದೇವಸ್ಥಾನದ ಹುಂಡಿಯಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹುಂಡಿಯಲ್ಲಿ ಅತ್ಯಧಿಕ ಹಣ ಸಂಗ್ರಹವಾಗಿದೆ.
ಈ ವರ್ಷ ರು. 3,51,907 ಹಣ ಸಂಗ್ರಹವಾಗಿದೆ ಎಂದು ದೇವಸ್ಥಾನ ನಿರ್ವಾಹಕ ಸಂಪತ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ರು.2,88,262 ಸಂಗ್ರಹವಾಗಿತ್ತು. ಈ ಸಾಲಿನ ತೀರ್ಥೋದ್ಭವದಲ್ಲಿ ರು.63,645 ಅಧಿಕ ಹಣ ಭಕ್ತಾದಿಗಳಿಂದ ಹರಿದು ಬಂದಿದೆ. ಹಣವನ್ನು ಹೊರತುಪಡಿಸಿದರೆ, 10 ಗ್ರಾಂ ಚಿನ್ನ ಹಾಗೂ 15 ಗ್ರಾಂ ಬೆಳ್ಳಿ ಸಹ ಹುಂಡಿಯಲ್ಲಿ ಸಂಗ್ರಹವಾಗಿದೆ.
ಅಮೆರಿಕಾದಲ್ಲಿ ನೆಲೆಸಿರುವ ಜಗದೀಶ್ ಎಂಬುವವರು ದೇವಸ್ಥಾನಕ್ಕೆ ಬೆಳ್ಳಿಯ ಬಾಗಿಲ ಕಾಣಿಕೆಯನ್ನು ಸಮರ್ಪಿಸಿದ್ದಾರೆ. ಹಾಗೆಯೇ ದುಬೈನಲ್ಲಿ ನೆಲೆಸಿರುವ ಅರುಣ್ ಕಾರಿಯಪ್ಪ ರು. 2.5 ಲಕ್ಷ ಬೆಲೆ ಬಾಳುವ ಕಂಠಹಾರವನ್ನು ದೇವಸ್ಥಾನಕ್ಕೆ ನೀಡಿದ್ದಾರೆ. ಇದೆಲ್ಲದರ ಜೊತೆಗೆ ಅಂಗವಿಕಲರು ಗೇಟಿನಿಂದ ದೇವಸ್ಥಾನಕ್ಕೆ ಬರಲು ಅನುವಾಗುವಂತೆ ರೋಟರಿ ಸಂಸ್ಥೆ ಗಾಲಿ ಕುರ್ಚಿಗಳನ್ನು ನೀಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
(ಯುಎನ್ ಐ)