ಈಶ್ವರಪ್ಪ ಮಹಾನ್ ಶೂದ್ರ: ವಿಶ್ವನಾಥ್
ಮೈಸೂರು, ಅ. 24 : 'ಈಶ್ವರಪ್ಪನಂಥ ಶೂದ್ರ ಮುಂಡೇದು ಇನ್ನು ಮುಂದಾದರೂ ಆಸೆ, ಆಮಿಷಗಳಿಗೆ ಬಲಿಯಾಗಿ ಬಾಯಿಗೆ ಬಂದ ಹೇಳಿಕೆ ನೀಡುವುದನ್ನು ನಿಲ್ಲಿಸಲಿ' ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಇಂದಿಲ್ಲಿ ಕಿವಿ ಮಾತು ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಅಧಿಕಾರದ ಆಸೆಯಿಂದ ಹಿಂದುಳಿದ ಜನಾಂಗಗಳ ನಡುವೆ ಒಡಕು ಉಂಟು ಮಾಡಲು ಈಶ್ವರಪ್ಪ ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಪೇಜಾವರ ಶ್ರೀಗಳ ಶಾಪದಿಂದ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್ ಬೀದಿಗೆ ಬಿದ್ದಿದ್ದಾರೆ ಎಂದಿರುವ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ವಿಶ್ವನಾಥ್ ಈ ರೀತಿ ಖಾರವಾಗಿ ಪ್ರತಿಕ್ರಿಯಿಸಿದರು.
ಪ್ರಜಾಪ್ರಭುತ್ವ ಜಾರಿಗೆ ಬಂದು 60 ವರ್ಷಗಳಾದರೂ ಅವರು ಶೂದ್ರರಂತೆ ಮಾತನಾಡುತ್ತಾರೆ. ಪೇಜಾವರ ಶ್ರೀಗಳ ಸಾನಿಧ್ಯದಲ್ಲಿ ಸಚಿವರೊಬ್ಬರು ಹೀಗೆ ಮಾತನಾಡುವುದು ಸರಿಯಲ್ಲ. ಈ ಬಗ್ಗೆ ಶ್ರೀಗಳು ಈಶ್ವರಪ್ಪನಂತವರಿಗೆ ಬುದ್ಧಿ ಹೇಳಬೇಕು ಎಂದು ಸಲಹೆ ನೀಡಿದರು. ಈಗ ಕನಕ ಗೋಪುರ ಇರಲಿಲ್ಲ ಎನ್ನುತ್ತಿರುವ ಈಶ್ವರಪ್ಪ ಮುಂದೊಂದು ದಿನ ಕನಕ ಕಿಂಡಿ ಇಲ್ಲ ಅನ್ನಬಹುದು. ಈ ರೀತಿ ಆಸೆ, ಆಮಿಷಗಳನ್ನು ಒಡ್ಡಿ ಈಶ್ವರಪ್ಪ ಅವರಿಂದ ಇಲ್ಲಸಲ್ಲದ ಹೇಳಿಕೆಗಳನ್ನು ಕೊಡಿಸುವ ಮೂಲಕ ಶೋಷಿತ ಸಮುದಾಯವನ್ನು ಒಡೆಯುವ ಹುನ್ನಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಪೇಜಾವರ ಶ್ರೀಗಳ ಶಾಪದಿಂದ ನಾವು ಬೀದಿಗೆ ಬಿದ್ದಿದ್ದರೆ, ಅದೇ ಪೇಜಾವರ ಶ್ರೀಗಳಿಂದ ಆಶೀರ್ವಾದ ಪಡೆದ ಉಮಾಭಾರತಿ ಏನಾದರು ? ವಾಜಪೇಯಿ, ಅಡ್ವಾಣಿ ಏನಾದರು ? ಎಂದು ಪ್ರಶ್ನಿಸಿದ ವಿಶ್ವನಾಥ್, ಈಗ ಅವರ ಅಧಿಕಾರ ಕಳೆದುಕೊಂಡು ಬೀದಿಗೆ ಬಿದ್ದಿಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)