ಸಚಿನ್ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ ಗಿಲ್ ಕ್ರಿಸ್ಟ್
ಸಿಡ್ನಿ, ಅ.23: ಆಸ್ಟ್ರೇಲಿಯಾ ತಂಡದ ಮಾಜಿ ಉಪನಾಯಕ ಹಾಗೂ ವಿಕೆಟ್ ಕೀಪರ್ ಆಡಂ ಗಿಲ್ ಕ್ರಿಸ್ಟ್ ತಮ್ಮ ಆತ್ಮಚರಿತ್ರೆ 'ಟ್ರೂ ಕಲರ್ಸ್' ಕೃತಿಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಸುಳ್ಳುಗಾರ ಎಂದು ಜರಿದಿದ್ದಾರೆ. ಜಗತ್ತಿನ ಶ್ರೇಷ್ಠ ಆಟಗಾರ ಸಚಿನ್ ರ ಕ್ರೀಡಾಸ್ಪೂರ್ತಿ ಹಾಗೂ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ಮೂಲಕ ಗಿಲ್ ಕ್ರಿಸ್ಟ್ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ.
ಗಿಲ್ ಕ್ರಿಸ್ಟ್ ತಮ್ಮ ಆತ್ಮಚರಿತ್ರೆಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಕುರಿತು ಬರೆಯುತ್ತಾ, ಸಚಿನ್ ಕ್ರೀಡಾಸ್ಪೂರ್ತಿಯನ್ನು ತೋರಿಸಿಲ್ಲ. ಕ್ರೀಡಾಂಗಣದಲ್ಲಿ ವೈರತ್ವ ಬೆಳೆಯುವ ರೀತಿ ನಡೆದುಕೊಂಡಿದ್ದಾರೆ. ಭಾರತವನ್ನು ನಾವು ಸೋಲಿಸಿದ ನಂತರ ಸಚಿನ್ ರ ಕೈಕುಲುಕಲೂ ಸಿಗಲಿಲ್ಲ. ಸಿಡ್ನಿಯಲ್ಲಿ ನಡೆದ 'ಕೋತಿ ವಿವಾದ' ವಿಚಾರಣೆ ವೇಳೆ ಸಚಿನ್ ಸುಳ್ಳು ಹೇಳಿರುವುದು ಸ್ಪಷ್ಟವಾಗಿದೆ. ಹರ್ಭಜನ್ ಹೇಳಿರುವುದು ಕೇಳಿಸಲಿಲ್ಲ ಎಂದಿರುವ ಸಚಿನ್ ನಂತರ ಭಜ್ಜಿ ಹಾಗೆ ಹೇಳಿಯೇ ಇಲ್ಲ ಎಂದು ಮಾತು ಬದಲಾಯಿಸಿದರು. ಇಲ್ಲಿ ಅವರು ಸುಳ್ಳು ಹೇಳಿರುವುದು ಸ್ಪಷ್ಟವಾಗಿದೆ ಎಂದು ಬರೆದಿದ್ದಾರೆ.
ಸಿಡ್ನಿ ಟೆಸ್ಟ್ ನಲ್ಲಿ ಸೋತ ನಂತರ ಅನಿಲ್ ಕುಂಬ್ಳೆ ಹಾಗೂ ಇಶಾಂತ್ ಶರ್ಮಾ ಗೆದ್ದ ತಂಡದ ಕೈಕುಲುಕುವ ಸೌಜನ್ಯವನ್ನೂ ತೋರಲಿಲ್ಲ. ನಂತರ ನಾವು ಡ್ರೆಸ್ಸಿಂಗ್ ರೂಂಗೆ ಹೋಗಿ ಕೈಕುಲುಕಿದೆವು ಎಂದು ವ್ಯಂಗವಾಡಿದ್ದಾರೆ. 500 ಪುಟಗಳನ್ನು ಹೊಂದಿರುವ ಆಡಂ ಗಿಲ್ ಕ್ರಿಸ್ಟ್ ರ ಆತ್ಮ ಚರಿತ್ರೆ ನವೆಂಬರ್ 1 ರಂದು ಮಾರುಕಟ್ಟೆಗೆ ಬರಲಿದೆ.
(ದಟ್ಸ್ ಕನ್ನಡ ಕ್ರೀಡಾವಾರ್ತೆ)