ನಗರದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಅಪಹರಣ
ಬೆಂಗಳೂರು, ಅ. 24 : ನಗರದಲ್ಲಿ ದಿನೆದಿನೇ ಶ್ರಿಮಂತ ಕುಳಗಳನ್ನು ಅಪಹರಿಸುವ ಪ್ರಕರಣಗಳು ಹೆಚ್ಚಾಗತೊಡಗಿವೆ. ಇತ್ತೀಚೆಗೆ ಮಹಿಳಾ ಸಾಫ್ಟವೇರ್ ಇಂಜನಿಯರೊಬ್ಬರನ್ನು ಅಪಹರಿಸಿದ ಬೆನ್ನಲ್ಲೇ ಇಂದು ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಯೊಬ್ಬರ ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿಯ ಅಪಹರಣವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಸೋಲದೇವನಕೊಪ್ಪದಲ್ಲಿರುವ ಆರ್ ಆರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಹೇಶ್ ಎಂಬಾತ ಅಪಹರಣಕ್ಕೀಡಾದ ವಿದ್ಯಾರ್ಥಿಯಾಗಿದ್ದಾನೆ. ಗುರುವಾರ ಕಾಲೇಜಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿರುವ ಮಹೇಶ್ ಈ ವರೆಗೂ ಬಂದಿಲ್ಲ. ಆತನನ್ನು ಅಪಹರಿಸಲಾಗಿದೆ ಎನ್ನುವ ಸಂಶಯದಿಂದ ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿಯಾಗಿರುವ ಮಹೇಶ ತಂದೆಗೆ ಗುರುವಾರ ರಾತ್ರಿ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ 20 ಲಕ್ಷ ರುಪಾಯಿಗಳ ಒತ್ತೆ ಹಣ ನೀಡಿದರೆ ಮಾತ್ರ ನಿಮ್ಮ ಪುತ್ರನನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಆದರೆ ನಿನ್ನೆಯಿಂದಲೂ ಮಹೇಶ ಹತ್ತಿರವಿರುವ ಮೊಬೈಲ್ ಆಫ್ ಆಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಫೋನ್ ಮಾಡಿ ಹಣ ನೀಡುವಂತೆ ಬೆದರಿಕೆ ಒಡ್ಡಿರುವವರ ಬಗ್ಗೆ ಇಲ್ಲಿಯವರೆಗೂ ಯಾವುದೇ ಮಾಹಿತಿ ದೊರೆತಿಲ್ಲ. ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ವ್ಯಾಪಕ ಜಾಲ ಬೀಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ವಿಪ್ರೋ ಉದ್ಯೋಗಿ ಅಪಹರಣ, ಬಿಡುಗಡೆ