ಕಸಕ್ಕಿಂತ ಕಡೆಯಾದ ರಸಋಷಿ ಪ್ರಸಂಗ
ಮೈಸೂರು, ಅ.21 : ರಾಷ್ಟ್ರಕವಿ ಕುವೆಂಪು ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ಬರುವ ಸಾಧ್ಯತೆಗಳಿದ್ದವು, ಆದರೆ ಉತ್ತರ ಭಾರತೀಯರು ಕುವೆಂಪು ಅವರಿಗೆ ನೊಬೆಲ್ ಬಾರದಂತೆ ಹಾಳು ಗೆಡವಿದರು ಎಂದು ಕುವೆಂಪು ಅವರ ಪಟ್ಟ ಶಿಷ್ಯ, ಖ್ಯಾತ ಸಾಹಿತಿ ಡಾ.ಎಸ್.ಪ್ರಭುಶಂಕರ ಅವರು ಪ್ರಕಟಿಸುವುದರ ಮೂಲಕ ಸಾಹಿತ್ಯ ವಲಯದಲ್ಲಿ ಹೊಸ ಬಾಂಬ್ ಸ್ಫೋಟಿಸಿದ್ದಾರೆ.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಿದ್ದ 'ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕನ್ನಡ ಸಾಹಿತ್ಯದ ಜನಪ್ರಿಯತೆ ನೊಬೆಲ್ ಪ್ರಶಸ್ತಿ ಸಮಿತಿಯನ್ನು ಪ್ರಭಾವಿಸಿತ್ತು. ಕಾವ್ಯ, ಕಾದಂಬರಿ, ನಾಟಕ, ಮಹಾ ಕಾವ್ಯ, ಪ್ರಬಂಧ ಹಾಗೂ ವಿಮರ್ಶೆಯಂತಹ ಸಾಹಿತ್ಯ ಪ್ರಕಾರಗಳನ್ನು ಪ್ರೋತ್ಸಾಹಿಸಲು ಪ್ರೊ. ವಿ.ಕೃ.ಗೋಕಾಕ್ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಸಮಿತಿ ಸ್ಥಾಪಿಸಲು ನೊಬೆಲ್ ಸಮಿತಿ ಸೂಚಿಸಿತ್ತು. ಈ ಬಗ್ಗೆ ಒಮ್ಮತದ ಅಭಿಪ್ರಾಯಕ್ಕೆ ಬಂದು ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಕುವೆಂಪು ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡುವಂತೆ ಅವರ ಹೆಸರನ್ನು ಸೂಚಿಸಲಾಯಿತು. ಕುವೆಂಪು ಅವರ ಎಲ್ಲ ಸಾಹಿತ್ಯ ಕೃಷಿಯನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿ ನವದೆಹಲಿಗೆ ಕೊಂಡೊಯ್ಯಲಾಯಿತು. ಈ ಹಂತದಲ್ಲೇ ಎದುರಾಗಿದ್ದು ಮಹಾವಿಪತ್ತು ಎಂದು ಪ್ರೊ.ಪ್ರಭುಶಂಕರ ವಿವರಿಸಿದರು.
ಕುವೆಂಪು ಅವರ ಭಾಷಾಂತರ ಕೃತಿಗಳನ್ನು ನವದೆಹಲಿಗೆ ಕೊಂಡೊಯ್ಯಲು ಪ್ರಭುಶಂಕರರು ರೈಲ್ವೆ ನಿಲ್ದಾಣಕ್ಕೆ ಹೋದರೆ, ಕೇಂದ್ರ ನೊಬೆಲ್ ಸಮಿತಿ ಅವರಿಗೆ ಯಾವುದೇ ರೈಲ್ವೆ ಸೀಟನ್ನು ಮುಂಗಡವಾಗಿ ಕಾದಿರಿಸಿರಲಿಲ್ಲ. ಕೇವಲ ಇದೊಂದಷ್ಟೇ ಅಲ್ಲ. ಉತ್ತರ ಭಾರತೀಯನೊಬ್ಬ ಕುವೆಂಪು ಅವರ ಸಾಹಿತ್ಯ ಕೃಷಿಯನ್ನು ಕಸದಂತೆ ಮೂಲೆಗೆ ಎಸೆದ. ರೈಲಿನಲ್ಲಿ ಕುಳಿತುಕೊಳ್ಳಲು ಸ್ಥಳವಿರಲಿಲ್ಲ. ಹೇಗೋ ಕಷ್ಟಪಟ್ಟು ದೆಹಲಿ ತಲುಪಿದ್ದಾಯಿತು ಎಂದು ಪ್ರೊ.ಪ್ರಭುಶಂಕರರು ತಮ್ಮ ಅಂದಿನ ದಿನಗಳನ್ನು ನೆನೆದರು.
ಬೇಕಂತಲೆ ಕುವೆಂಪು ಅವರ ಶ್ರೇಷ್ಠ ಕೃತಿಗಳನ್ನು ಕೇಂದ್ರ ನೊಬೆಲ್ ಸಮಿತಿ ಕಡೆಗಣಿಸಿತು. ಕುವೆಂಪುರವರಿಗೆ ನೊಬೆಲ್ ಸಿಗದಂತೆ ಮಾಡಲಾಯಿತು ಎಂದು ತಮ್ಮ ಹಳೆಯ ನೆನಪುಗಳನ್ನು ಪ್ರಭುಶಂಕರ ಹೊರಗೆಡಹಿದರು.''ಈ ದುರಂತ ಕಥೆಯನ್ನು ಇದುವರೆಗೂ ಎಲ್ಲೂ ಬಹಿರಂಗ ಪಡಿಸಿಲ್ಲ. ಈ ಘಟನೆಯನ್ನು ನೆನೆದರೆ ತುಂಬಾ ನೋವಾಗುತ್ತದೆ. ಕಲ್ಲೆದೆಯ ವ್ಯಕ್ತಿಗಳ ವರ್ತನೆಯಿಂದ ಕುವೆಂಪು ಅವರಿಗೆ ನೊಬೆಲ್ ತಪ್ಪಿಹೋಯಿತು'' ಎಂದು ವಿಷಾದ ವ್ಯಕ್ತಪಡಿಸಿದರು.