ಭಜರಂಗಿ ಮಹೇಂದ್ರ ಮೇಲೆ ಗೂಂಡಾ ಕಾಯ್ದೆ ಅಸ್ತ್ರ
ಮಂಗಳೂರು, ಅ. 21 : ದೇಶದ ಗಮನವನ್ನು ತನ್ನಡೆ ಸೆಳೆದುಕೊಳ್ಳುವ ಮೂಲಕ ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದ್ದ ಚರ್ಚ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರಕುಮಾರ್ ವಿರುದ್ಧ ಮಂಗಳೂರು ಪೊಲೀಸರು ಗೂಂಡಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮಹೇಂದ್ರ ಕುಮಾರ್ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿರುವ ವಿಷಯ ತಿಳಿಯುತ್ತಿದ್ದಂತೆಯೇ ನಗರದ ಉಪಕಾರಾಗೃಹದ ಎದುರು ಭಜರಂಗದಳದ ನೂರಾರು ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಹಾಗೆಯೇ ನಗರದ ಬಿಜೆಪಿ ಕಚೇರಿಯ ಎದುರು ಪ್ರತಿಭಟನೆ ಕೈಗೊಳ್ಳಲಾಗಿದೆ.
ಮಹೇಂದ್ರ ಕುಮಾರ್ ವಿರುದ್ಧ ದಾಖಲಿಸಲಾಗಿರುವ ಗೂಂಡಾ ಕಾಯ್ದೆ ರಾಜಕೀಯ ಪ್ರೇರಿತವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಸರ್ಕಾರ ಕೆಲವರ ಒತ್ತಡಕ್ಕೆ ಮಣಿದು ಗೊಂಡಾ ಕಾಯ್ದೆ ದಾಖಲಿಸಿರುವುದು ಸರಿಯಾದ ಕ್ರಮವಲ್ಲ. ಘಟನೆಯ ನಂತರ ಕಾಯ್ದೆ ರೂಪಿಸಲಾಗಿದೆ ಹೊರತು ಘಟನೆಯ ಪೂರ್ವದಲ್ಲಿ ಕಾಯ್ದೆಯನ್ನು ರಚಿಸಿಲ್ಲ. ಆದ್ದರಿಂದ ಮಹೇಂದ್ರಕುಮಾರ್ ವಿರುದ್ಧ ದಾಖಲಿಸಲಾಗಿರುವ ಗೂಂಡಾ ಕಾಯ್ದೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇತ್ತೀಚೆಗೆ ರಾಜ್ಯದ ವಿವಿಧ ಭಾಗದಲ್ಲಿ ಚರ್ಚ್ ಗಳ ಮೇಲೆ ನಡೆದಿರುವ ಎಲ್ಲ ದಾಳಿಗಳಿಗೂ ಮಹೇಂದ್ರ ಕುಮಾರ್ ಅವರನ್ನು ಹೊಣೆಯಾಗಿಸಿ ಅವರ ವಿರುದ್ಧ ಗಂಭೀರ ಪ್ರಮಾಣದ ಪ್ರಕರಣ ದಾಖಲಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ. ಸರ್ಕಾರ ಈ ವಿಷಯದಲ್ಲಿ ಇನ್ನೊಂದು ಸಾರಿ ಅವಲೋಕಿಸಬೇಕಿದೆ. ಮಂಗಳೂರಿನಲ್ಲಿ ನ್ಯೂಲೈಫ್ ಸಂಘಟನೆ ಮತಾಂತರ ಮಾಡುತ್ತಿರುವುದನ್ನು ಖಂಡಿಸಿ ಅವರಿಗೆ ಎಚ್ಚರಿಕೆ ನೀಡಲಾಗಿತ್ತೇ ಹೊರತು ದಾಳಿಯಂಥ ಘಟನೆಗಳಿಗೆ ಪ್ರಚೋದನೆ ನೀಡಿಲ್ಲ ಎಂದು ಭಜರಂಗದಳ ಕಾರ್ಯಕರ್ತರು ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಭಜರಂಗ
ಮುಖಂಡ
ಮಹೇಂದ್ರ
ರಾಜೀನಾಮೆ
ಭಜರಂಗದಳದ
ರಾಜ್ಯ
ಸಂಚಾಲಕರ
ಬಂಧನ