ನಗರದ ವಿದ್ಯಾರ್ಥಿನಿ ಮೇಲೆ ಆಸಿಡ್ ದಾಳಿ
ಬೆಂಗಳೂರು, ಅ. 21 : ಬೈಕ್ ನಲ್ಲಿ ಬಂದ್ ಏರ್ ಫೋರ್ಸ್ ಉದ್ಯೋಗಿಯೊಬ್ಬ ಮದುವೆಗೆ ನಿರಾಕರಿಸಿದ ಕಾಲೇಜು ವಿದ್ಯಾರ್ಥಿನಿಯ ಮುಖದ ಮೇಲೆ ಆಸಿಡ್ ಎರಚಿ ಪರಾರಿಯಾಗಿರುವ ಘಟನೆ ನಗರದ ಟ್ರಿನಿಟಿ ವೃತ್ತದಲ್ಲಿ ಮಂಗಳವಾರ ನಡೆದಿದೆ.
ನಗರದ ಬಿಷಪ್ ಕಾಟನ್ ಕಾಲೇಜಿನಲ್ಲಿ ಎಲ್ಎಲ್ ಬಿಯ 5ನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವ 'ಕಾರ್ತಿಕಾ' ಎಂಬ ಯುವತಿ ಆಸಿಡ್ ದಾಳಿಗೆ ಒಳಗಾದ ನತದೃಷ್ಟೆ. ವಿಮಾನಯಾನ ಇಲಾಖೆಯ ವಿಭಾಗವೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ರಾಕೇಶ್ ಎಂಬಾತ ಕಾರ್ತಿಕಾಳನ್ನು ಮದುವೆಯಾಗು ಎಂದು ಪದೆಪದೇ ಪೀಡಿಸುತ್ತಿದ್ದ. ಆದರೆ ಕಾರ್ತಿಕಾ ಮದುವೆಗೆ ನಿರಾಕರಿಸುತ್ತಿದ್ದಳು. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ತಿಕಾ ಮತ್ತು ರಾಕೇಶ್ ನಡುವೆ ಗಲಾಟೆಗಳೂ ಆಗಿದ್ದವು. ಕಾರ್ತಿಕಾಳ ಮನೆಯಲ್ಲಿ ಕೂಡಾ ಈ ಸಂಗತಿ ತಿಳಿದಿತ್ತು ಎನ್ನಲಾಗಿದೆ.
ಆಸಿಡ್ ಎರಚಿದ ರಾಕೇಶ್ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಹೇಳಿದ್ದಾರೆ. ರಾಕೇಶ್ ಕುರಿತು ಸಮಗ್ರ ಮಾಹಿತಿ ಕಲೆ ಹಾಕಲಾಗಿದೆ. ಆರೋಪಿಯನ್ನು ರಾತ್ರಿಯೊಳಗೆ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ತಿಕಾಳ ತಂದೆಗೆ ಭರವಸೆ ನೀಡಿದ್ದಾರೆ.
ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿರುವ ಕಾರ್ತಿಕಾಳನ್ನು ಸಾಗರ್ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸಿಡ್ ದಾಳಿಯಿಂದ ಕಾರ್ತಿಕಾಳ ದೇಹ ಶೇ. 20ರಷ್ಟು ಸುಟ್ಟುಹೋಗಿದೆ. ಆದರೆ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇತ್ತೀಚೆಗೆ ವಿವಿಧ ಕಾರಣಗಳಿಗೆ ಯವತಿ ಹಾಗೂ ಮಹಿಳೆಯರ ಮೇಲೆ ಅನೇಕ ದಾಳಿ ನಡೆದ ಹಿನ್ನೆಲೆಯಲ್ಲಿ ಮಹಿಳಾ ಸಂಘಟನೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಮತ್ತೆ ಇಂದು ವಿದ್ಯಾರ್ಥಿನಿ ಮೇಲೆ ಎಸಿಡ್ ದಾಳಿ ನಡೆದಿರುವುದು ಪೋಷಕರು ಆತಂಕ ಪಡುವಂತಾಗಿದೆ.
(ದಟ್ಸ್ ಕನ್ನಡ ವಾರ್ತೆ)