ತೀರ್ಥೋದ್ಭವ ವೀಕ್ಷಿಸಿದ ಅಪಾರ ಭಕ್ತರು
ತಲಕಾವೇರಿ, ಅ. 17 : ದಕ್ಷಿಣದ ಗಂಗೆ ಎಂದೇ ಖ್ಯಾತಿ ಪಡೆದಿರುವ ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಶುಕ್ರವಾರ ಮಧ್ಯಾಹ್ನ 2.39 ಕ್ಕೆ ತೀರ್ಥೋದ್ಭವವಾಯಿತು. ಸೂರ್ಯ ತುಲಾರಾಶಿಗೆ ಪ್ರವೇಶಿಸುವ ಶುಭ ಘಳಿಗೆಯಲ್ಲಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವಾಗುತ್ತದೆ. ತುಲಾ ಮಾಸದಲ್ಲಿ ಉತ್ತರ ಭಾರತದ ಗಂಗೆ ದಕ್ಷಿಣದ ಕಾವೇರಿಯಲ್ಲಿ ಐಕ್ಯವಾಗುತ್ತಾಳೆ ಎಂಬ ನಂಬಿಕೆ ಉಂಟು.
ಪ್ರತಿ ವರ್ಷ ತುಲಾ ಸಂಕ್ರಮಣದಂದು ನಡೆಯುವ ತೀರ್ಥೋದ್ಭವ ವೀಕ್ಷಿಸಲು ರಾಜ್ಯ ಸೇರಿ ನೆರೆಹೊರೆ ರಾಜ್ಯದವರು ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಆಗಮಿಸುತ್ತಾರೆ. ತೀರ್ಥೋದ್ಭವಾದ ಗಳಿಗೆಯಲ್ಲಿ ಕಾವೇರಿಯ ನೀರಿನ ಪ್ರೋಕ್ಷಣೆಯಾದರೂ ಸಾಕು ಸಕಲ ಪಾಪಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ತೀರ್ಥೋದ್ಭವಾದ ಕೂಡಲೆ ನೀರಿನ ಪ್ರೋಕ್ಷಣೆಗಾಗಿ ಭಾರೀ ನೂಕುನುಗ್ಗಲು ಕಂಡುಬಂದಿತು. ಈ ವರ್ಷ ಹಗಲಿನ ವೇಳೆಯಲ್ಲಿ ತೀರ್ಥೋದ್ಭವ ಆಗಿದ್ದರಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಉಗಮ ಸ್ಥಾನ ಬ್ರಹ್ಮಕುಂಡಿಕೆಯಲ್ಲಿ ವೇದಮೂರ್ತಿ ಗೋಪಾಲಕೃಷ್ಣಾಚಾರ್ಯ ನೇತೃತ್ವದಲ್ಲಿ ಅರ್ಚಕರ ಸಮೂಹ ಜೀವನದಿ ಕಾವೇರಿಗೆ ಪೂಜಾ ವಿಧಿವಿಧಾನಗಳನ್ನು ಸಾಂಗೋಪಾಂಗವಾಗಿ ನಡೆಸಿಕೊಟ್ಟರು. ತೀರ್ಥೋದ್ಭವ ವೀಕ್ಷಿಸಲು ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳದಿಂದ ಲಕ್ಷಾಂತರ ಜನರು ಆಗಮಿಸಿದ್ದರು.
ಕೊಡಗು ಜಿಲ್ಲೆ ರಾಜ್ಯದ ಪ್ರಮುಖ ಪ್ರವಾಸಿ ತಾಣ. ಆದರೆ, ಮೂಲಭೂತ ಸೌಕರ್ಯಗಳ ಕೊರತೆ ಪ್ರವಾಸಿಗರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತೀರ್ಥೋದ್ಭವಕ್ಕೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಆದರೆ ಭಾಗಮಂಡಲ ಪ್ರದೇಶ ಈವರೆಗೂ ಅದರ ಅಭಿವೃದ್ಧಿ ಕಂಡಿಲ್ಲ. ಅಧಿಕಾರಕ್ಕೆ ಬಂದ ಯಾವ ಸರ್ಕಾರಗಳು ಅಭಿವೃದ್ಧಿಗೆ ಮನಸ್ಸು ಮಾಡದಿರುವುದು ವಿಪರ್ಯಾಸ ಸಂಗತಿಯಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಓದಲು
ಮರೆಯದಿರಿ
ಅಲೆಪ್ಪಿ
ಎಳ'ನೀರುದಾರಿ'ಗಳ
ಹಾಡು!
ಕೊಡಗು
ಹೊಸ
ಜಿಲ್ಲಾಧಿಕಾರಿ
ಬಲದೇವಕೃಷ್ಣ