ಎನ್ ಐಸಿಯಲ್ಲಿ ಭಾಗವಹಿಸಿಲು ಬಿಎಸ್ ವೈ ದೆಹಲಿಗೆ
ನವದೆಹಲಿ, ಅ.12: ಒರಿಸ್ಸಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಉಂಟಾದ ಕೋಮು ಗಲಭೆಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭಾವೈಕ್ಯತಾ ಮಂಡಳಿ(ಎನ್ ಐಸಿ) ಸಭೆಯನ್ನು ಸೋಮವಾರ(ಅ.13) ಕರೆಯಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಸಭೆಯಲ್ಲಿ ಭಾಗವಹಿಸಲು ಭಾನುವಾರ ಬೆಳಗ್ಗೆ ದೆಹಲಿಗೆ ತೆರಳಿದ್ದಾರೆ.
ನಾಳೆಯ ಸಭೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿ ನಂತರ ಈ ದಾಳಿಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಿದ ಬಗ್ಗೆ ಮುಖ್ಯಮಂತ್ರಿಗಳು ವಿವರಿಸಲಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು ರಾಷ್ಟ್ರೀಯ ಏಕತೆಗೆ ಭಂಗ ತರುವ ಕೋಮು ಗಲಭೆಗಳಂತಹ ಸಂದರ್ಭಗಳನ್ನು ಎದುರಿಸುವ ಕುರಿತು ಪ್ರಮುಖವಾಗಿ ಚರ್ಚಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಪರಸ್ಪರ ಸಂಬಂಧಗಳನ್ನು ವೃದ್ಧಿಸಿಕೊಳ್ಳುವ ಬಗ್ಗೆ ಹಾಗೂ ಕೋಮುವಾದ,ಭಯೋತ್ಪಾದನೆಯಂತಹ ಕೃತ್ಯಗಳನ್ನು ತಡೆಯುವ ಬಗ್ಗೆ ಚರ್ಚೆ ನಡೆಯಲಿದೆ.
ಕರ್ನಾಟಕ ಹಾಗೂ ಒರಿಸ್ಸಾದಲ್ಲಿ ಕ್ರೈಸ್ತರು ಹಾಗೂ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ಹೆಚ್ಚುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಭಜರಂಗ ದಳದ ಮೇಲೆ ನಿಷೇಧ ಹೇರುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ತರುವ ಸಾಧ್ಯತೆಗಳಿವೆ. ಲೋಕ ಜನಶಕ್ತಿ (ಎಲ್ ಜೆಪಿ) ಹಾಗೂ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಪಕ್ಷಗಳು ಭಜರಂಗ ದಳದ ಮೇಲೆ ನಿಷೇಧ ಹೇರಲು ಯುಪಿಎ ಸರ್ಕಾರದ ಮೇಲೆ ಒತ್ತಡ ತಂದಿದ್ದವು, ಆದರೆ ಡಿಎಂಕೆ, ಪಿಎಂಕೆ ಹಾಗೂ ಎನ್ ಸಿಪಿ ಪಕ್ಷಗಳು ಇದನ್ನು ವಿರೋಧಿಸಿದ್ದವು.
(ಏಜೆನ್ಸೀಸ್)












Click it and Unblock the Notifications