ತುಂಗಭದ್ರಾ ಸೇತುವೆ ಮೇಲೆ ಮೈನ್ಸ್ ಲಾರಿ ನಿಷೇಧ
ಕೊಪ್ಪಳ ಅ.7: ತುಂಗಭದ್ರಾ ನದಿ ಸೇತುವೆ ಮೂಲಕ ಅದಿರು ತುಂಬಿದ ಮೈನ್ಸ್ ಲಾರಿಗಳು ಮತ್ತು ಭಾರಿ ಸರಕು ಸಾಗಾಣಿಕೆ ವಾಹನಗಳು ಸಂಚರಿಸುವುದನ್ನು ತಕ್ಷಣ ಜಾರಿಗೆ ಬರುವಂತೆ ನಿಷೇಧಿಸಿ ಜಿಲ್ಲಾಧಿಕಾರಿ ಕೆ. ರಾಮಣ್ಣ ನಾಯ್ಕ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಸಂಡೂರು ಮತ್ತು ಬಳ್ಳಾರಿ ತಾಲೂಕುಗಳಿಂದ ಮ್ಯಾಂಗನೀಸ್ ಅದಿರು ಮತ್ತು ಕಬ್ಬಿಣದ ಅದಿರು ಸಾಗಿಸುವ ಸಾವಿರಾರು ಲಾರಿಗಳು ದಿನನಿತ್ಯ ಮುನಿರಾಬಾದ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 13 ರಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಿರುವ ಸೇತುವೆಯ ಮೂಲಕ ಕಾರವಾರ, ಗೋವಾ ಮತ್ತು ಮಂಗಳೂರು ಬಂದರುಗಳಿಗೆ ತಲುಪಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 13ಮತ್ತು 63 ರಲ್ಲಿ ಸುಮಾರು 40 ಟನ್ ಅದಿರು ತುಂಬಿದ ಲಾರಿಗಳಲ್ಲದೆ ಇತರ 100ಟನ್ವರೆಗೂ ಸರಕು ತುಂಬಿದ ವಾಹನಗಳು ಸಂಚರಿಸುತ್ತಿವೆ. ಈ ಕಾರಣದಿಂದಾಗಿ ಕಳೆದ ಅ. 4 ರಂದು ಕೊಪ್ಪಳ ತಾಲೂಕಿನ ದದೇಗಲ್ ಗ್ರಾಮದ ಹತ್ತಿರ ಹಿರೇಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಕುಸಿದು ಬಿದ್ದು, ವಾಹನ ಸಂಚಾರ ಸ್ಥಗಿತಗೊಂಡಿರುತ್ತದೆ.
ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ಮೋಟಾರು ವಾಹನ ಕಾಯ್ದೆ ಮತ್ತು ಮೋಟಾರು ವಾಹನ ನಿಯಮಾವಳಿಯನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಕೆ. ರಾಮಣ್ಣ ನಾಯ್ಕ್ ಅವರು ತುಂಗಭದ್ರಾ ನದಿ ಸೇತುವೆ ಮೇಲೆ ಮೈನ್ಸ್ ಲಾರಿಗಳು ಮತ್ತು ಭಾರಿ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಈ ಸೇತುವೆಯ ಮೂಲಕ ಬಸ್ಗಳು, ರೈತರ ಟ್ರ್ಯಾಕ್ಟರ್ಗಳು ಮತ್ತು ಇತರೆ ಲಘು ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಹಕಾರದೊಂದಿಗೆ ಅವಶ್ಯವಿದ್ದ ಕಡೆ ಸಲಹಾ ಫಲಕಗಳನ್ನು ಅಳವಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಬಳ್ಳಾರಿ: ದಿವಾಕರಬಾಬು ಬಂಧನ, ಬಿಡುಗಡೆ
ಗಣಿಗಾಗಿ ರಾಜ್ಯದ ನಕ್ಷೆ ತಿರುಚಿಲ್ಲ : ಜನಾರ್ದನರೆಡ್ಡಿ












Click it and Unblock the Notifications