ಅಂತಾರಾಷ್ಟ್ರೀಯ ಕ್ರಿಕೆಟ್ ಗಂಗೂಲಿ ವಿದಾಯ
ಬೆಂಗಳೂರು, ಅ. 7 : ಸತತ ವೈಫಲ್ಯದ ನಡುವೆ ಮತ್ತೆ ಭಾರತೀಯ ಕ್ರಿಕೆಟ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಮಾಜಿ ನಾಯಕ, ಬಂಗಾಳದ ದಾದಾ ಸೌರವ್ ಗಂಗೂಲಿ ಆಸ್ಟ್ರೇಲಿಯಾ ಸರಣಿ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತ ಘೋಷಿಸುವುದಾಗಿ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ಫಾರಂ ಕಳೆದುಕೊಂಡಿರುವ ಗಂಗೂಲಿ ಇತ್ತೀಚೆಗೆ ನಡೆದ ಇರಾನಿ ಟ್ರೋಫಿಗೆ ಆಯ್ಕೆಯಾದ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧ ಸೆಣಸಲು ಭಾರತದ ತಂಡದಲ್ಲಿ ಸ್ಥಾನ ಪಡೆದಿದ್ದು ಅಚ್ಚರಿಯ ಸಂಗತಿಯಾಗಿತ್ತು. ಸುಮಾರು ಮೂರು ತಿಂಗಳಿನಿಂದ ಹಬ್ಬಿದ್ದ ನಿವೃತ್ತಿಯ ಸುದ್ದಿಗೆ ತೆರೆ ಎಳೆದಿರುವ ಅವರು, ಅಸ್ಟ್ರೇಲಿಯಾ ಸರಣಿ ನಂತರ ಸಕ್ರಿಯ ಕ್ರಿಕೆಟ್ ಗೆ ನಿವೃತ್ತ ಘೋಷಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಗಂಗೂಲಿ ಸಕಾಲದಲ್ಲಿ ನಿರ್ಧಾರ ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರ ಅಭಿಮಾನಿಗಳಿಂದ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಇಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಂಗೂಲಿ, ಆಸ್ಟ್ರೇಲಿಯಾ ಸರಣಿ ನನ್ನ ಕ್ರಿಕೆಟ್ ಜೀವನದ ಕೊನೆಯ ಸರಣಿಯಾಗಲಿದೆ. ಈ ಸರಣಿ ನಂತರ ನಾನು ನಿವೃತ್ತಿ ತೆಗೆದುಕೊಳ್ಳುವ ನಿರ್ಧಾರ ಬಂದಿದ್ದೇನೆ ಎಂದು ಭಾವುಕರಾಗಿ ನುಡಿದರು. ಕ್ರಿಕೆಟ್ ಜೀವನದಲ್ಲಿ ನನಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನನ್ನ ಕ್ರಿಕೆಟ್ ಜೀವನದಲ್ಲಿ ಏನಾದರೂ ಸಾಧನೆ ಮಾಡಿರುವೆ ಎಂದಾದಲ್ಲಿ ಕ್ರಿಕೆಟ್ ಅಭಿಮಾನಿಗಳ ಮೂಲಕ ಸಂದಿದೆ ಎಂದು ಹೇಳಿದರು. ಯುವಕರು ಇಂದು ಉತ್ತಮವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಅವರಿಗಾಗಿ ನಮ್ಮ ಸ್ಥಾನವನ್ನು ತೆರವುಗೊಳಿಸಲೆಬೇಕು ಎಂದು ಗಂಗೂಲಿ ಹೇಳಿದರು.
ಗಂಗೂಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಗಂಗೂಲಿ ಕೂಡಾ ಶ್ರೇಷ್ಠ ಆಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ. 311 ಏಕದಿನ ಪಂದ್ಯಗಳಲ್ಲಿ 11363 ರನ್ ಹಾಗೂ 109 ಟೆಸ್ಟ್ ಪಂದ್ಯಗಳಲ್ಲಿ 6888 ರನ್ ಗಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)