ಐಬಿಎಂ ಉದ್ಯೋಗಿ ಕೊಲೆ, ಗೆಳೆಯರ ಕೈವಾಡ ಶಂಕೆ
ಬೆಂಗಳೂರು, ಅ.6: ಬನ್ನೇರುಘಟ್ಟ ರಸ್ತೆಯ ಐಬಿಎಂ ಸಂಸ್ಥೆಯ ಉದ್ಯೋಗಿ ಮನೋಜ್(24)ಎಂಬುವವರು ವಿಜಯನಗರದ ತಮ್ಮ ನಿವಾಸದಲ್ಲಿ ಕೊಲೆಯಾಗಿದ್ದಾರೆ. ಇದರಲ್ಲಿ ಆತನ ಸ್ನೇಹಿತ ಕೈವಾಡ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೂಲತಃ ಸಕಲೇಶಪುರ ನಿವಾಸಿಯಾಗಿದ್ದ ಈತ ಎಂಬಿಎ ಮುಗಿಸಿ ಎಂಟು ತಿಂಗಳ ಹಿಂದೆ ಬನ್ನೇರುಘಟ್ಟ ರಸ್ತೆಯ ಐಬಿಎಂ ಸಂಸ್ಥೆಯಲ್ಲಿ ನೌಕರಿ ಪಡೆದಿದ್ದ. ಶನಿವಾರ ಆತನ ತಂದೆ ಸಕಲೇಶಪುರದಿಂದ ಮೇಲಿಂದ ಮೇಲೆ ಕರೆ ಮಾಡಿದರು ಪ್ರತಿಕ್ರಿಯೆ ಇರಲಿಲ್ಲ. ಸಂಬಂಧಿ ಪ್ರಕಾಶ್ ವಿಜಯನಗರದ ಮನೆಗೆ ಹೋಗಿ ನೋಡಿದಾಗ ಮನೋಜ್ ಕೊಲೆಯಾಗಿ ಬಿದ್ದಿದ್ದ. ಮನೋಜ್ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಮನೋಜ್ ನ ಸ್ನೇಹಿತರು ಎನ್ನಲಾದ ಕಾರ್ತಿಕ್, ಕಿರಣ್ ಹಾಗೂ ಪುಟ್ಟ ಎನ್ನುವವರು ಕಾಣೆಯಾಗಿದ್ದಾರೆ. ಜೊತೆಗೆ ಮನೋಜ್ ನ ಸ್ಯಾಂಟ್ರೊ ಕಾರು, ಮೊಬೈಲ್, ಚಿನ್ನದ ಉಂಗುರ, ಚಿನ್ನದ ಸರ ಕಾಣೆಯಾಗಿವೆ.
ತನ್ನ ನಿವಾಸದಲ್ಲಿ ಮನೋಜ್ ಸ್ನೇಹಿತರೊಂದಿಗೆ ಜೂಜಾಡುತ್ತಿದ್ದ. ಆತನಿಗೆ ಹುಡುಗಿಯರ ಶೋಕಿಯು ಇತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕಾರಣದಿಂದ ಸ್ನೇಹಿತರ ನಡುವೆ ಕಿತ್ತಾಟ ನಡೆದು ಕೊಲೆಯಾಗಿರಬಹುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)