ಸಿಂಗೂರಿಗೆ ಅಧಿಕೃತವಾಗಿ 'ಟಾಟಾ' ಹೇಳಿದ ಟಾಟಾ
ಕೋಲ್ಕತಾ, ಅ. 03 : ಸಿಂಗೂರಿನಲ್ಲಿ ನ್ಯಾನೋ ಕಾರು ಉತ್ಪಾದನಾ ಘಟಕವನ್ನು ಉಳಿಸಿಕೊಳ್ಳಬೇಕೆಂಬ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಜಿ ಅವರ ಕೊನೆಯ ಪ್ರಯತ್ನವೂ ಫಲಕಾರಿಯಾಗಿಲ್ಲ. ಪಶ್ಚಿಮ ಬಂಗಾಳಕ್ಕೆ ಟಾಟಾ ಹೇಳುವುದು ಅಧಿಕೃತವಾಗಿದ್ದು ಎಲ್ಲರ ಕಣ್ಣು ಈಗ ಗುಜರಾತ್ ಅಥವಾ ಕರ್ನಾಟಕದ ಮೇಲೆ ನೆಟ್ಟಿವೆ.
ಭಟ್ಟಾಚಾರ್ಜಿಯವರೊಡನೆ ಶುಕ್ರವಾರ 75 ನಿಮಿಷಗಳ ಮಾತುಕತೆ ನಡೆಸಿದ ನಂತರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಟಾಟಾ ಕಂಪನಿಯ ಮುಖ್ಯಸ್ಥ ರತನ್ ಟಾಟಾ ನ್ಯಾನೋ ಘಟಕವನ್ನು ಪಶ್ಚಿಮ ಬಂಗಾಳದಿಂದ ಬೇರೆ ರಾಜ್ಯಕ್ಕೆ ಸ್ಥಳಾಂತರಿಸುತ್ತಿರುವುದಾಗಿ ಘೋಷಿಸಿದರು. ಪಶ್ಚಿಮ ಬಂಗಾಳದಿಂದ ಹೊರಹೋಗುತ್ತಿರುವುದು ನೋವಿನ ಸಂಗತಿಯಾಗಿದೆ. ಆದರೆ, ಸಿಬ್ಬಂದಿಯ ಹಿತದೃಷ್ಟಿಯಿಂದ ಈ ಕಾರ್ಯ ಕೈಗೊಳ್ಳಲೇಬೇಕಾಗಿದೆ ಎಂದು ಅವರು ಹೇಳಿದರು.
ಇಲ್ಲಿಂದ ಹೊರಹೋಗಲು ಪಶ್ಚಿಮ ಬಂಗಾಳ ಸರ್ಕಾರ ಕಾರಣ ಅಲ್ಲವೇ ಅಲ್ಲ. ಈ ಯೋಜನೆಯಿಂದಾಗಿ ನಾವು ಸಾಕಷ್ಟು ಪಾಠವನ್ನೂ ಕಲಿತಿದ್ದೇವೆ ಎಂದ ಅವರು ಯಾರನ್ನೂ ನೇರವಾಗಿ ದೂಷಿಸಲಿಲ್ಲ. ಈ ತರಹದ ಪ್ರತಿಭಟನೆಗಳಿಂದ ಅನೇಕ ಯೋಜನೆಗಳು ಪಶ್ಚಿಮ ಬಂಗಾಳಕ್ಕೆ ಬಿಟ್ಟುಹೋಗಲಿವೆ ಎಂದು ಅವರು ಕಿವಿಮಾತು ಹೇಳಿದರು.
ಪಶ್ಚಿಮ ಬಂಗಾಳ ಟಾಟಾ ಕಂಪನಿಗೆ ನೀಡಿದ್ದ ಸಾವಿರ ಎಕರೆ ಜಮೀನಿನಲ್ಲಿ 600 ಎಕರೆ ಮಾತ್ರ ಕಾರು ತಯಾರಿಕೆಗೆ ಬಳಸಿಕೊಂಡು ಉಳಿದ ಜಮೀನನ್ನು ರೈತರಿಗೆ ಹಿಂದುರಿಗಿಸಿಕೊಡಬೇಕೆಂದು ತೃಷಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ರೈತರು ಹೂಡಿದ್ದ ಪ್ರತಿಭಟನೆ ಕಾರು ಉತ್ಪಾದನಾ ಯೋಜನೆ ಮುಂದುವರಿಯಲು ಅಡ್ಡಿಯಾಯಿತು. ಇದರಿಂದಾಗಿ ಪಶ್ಚಿಮ ಬಂಗಾಳಕ್ಕೆ 80ರಿಂದ 100 ಸಾವಿರ ಕೋಟಿ ರು. ಆದಾಯ ನಷ್ಟವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಈ ಪುಟಾಣಿ ಕಾರಿನ ಉತ್ಪಾದನೆಯ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಅತ್ಯುತ್ತಮ ಮೂಲಭೂತ ಸೌಕರ್ಯ ಒದಗಿಸುವ ಕನಸನ್ನು ರತನ್ ಟಾಟಾ ಬಿತ್ತಿದ್ದರು.
ಕರ್ನಾಟಕ ಅಥವಾ ಗುಜರಾತ್? : ಪಶ್ಚಿಮ ಬಂಗಾಳದಿಂದ ಹೊರಬಿದ್ದಿರುವ ಟಾಟಾ ಘಟಕ ಸ್ಥಾಪನೆ ಕುರಿತಂತೆ ಮುಂದಿನ ಯೋಜನೆಯನ್ನು ಬಹಿರಂಗಪಡಿಸಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಅಭಿವೃದ್ಧಿಯ ಪಥದಲ್ಲಿರುವ ಗುಜರಾತ್ ಅತ್ಯಂತ ಸೂಕ್ತ ತಾಣ ಎಂದು ಹೇಳಲಾಗುತ್ತಿದ್ದರೂ, ಕರ್ನಾಟಕದಲ್ಲಿ ಘಟಕ ಸ್ಥಾಪಿಸುವ ಬಗ್ಗೆಯೂ ಟಾಟಾ ಕಂಪನಿ ಚಿಂತನೆ ನಡೆಸಿದೆ.
ಧಾರವಾಡದ ಬಳಿ ನ್ಯಾನೋ ಕಾರು ಘಟಕ ಸ್ಥಾಪಿಸುವುದಾದರೆ ಜಮೀನು ಸೇರಿದಂತೆ ಎಲ್ಲ ಅನುಕೂಲಗಳನ್ನು ಮಾಡಿಕೊಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟಾಟಾಗೆ ಆಮಿಷ ಒಡ್ಡಿದ್ದಾರೆ. ಕೈಗಾರಿಕೆ ಸ್ಥಾಪಿಸುವಲ್ಲಿ ಒದಗಬಹುದಾದ ತೊಂದರೆಗಳು, ಆಸ್ತಿ ನೊಂದಣಿಗೆ ಅಡೆತಡೆಗಳು ಮುಂತಾದವುಗಳನ್ನು ಗಮನದಲ್ಲಿಟ್ಟು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ನ್ಯಾನೋ ಘಟಕ ಸ್ಥಾಪನೆಗೆ ಅತ್ಯಂತ ಸೂಕ್ತ ಸ್ಥಳ ಎನ್ನುವ ಮಾತುಗಳೂ ಕೇಳಿಬರುತ್ತಿವೆ.
ಎರಡೂ ರಾಜ್ಯಗಳ ಪ್ರತಿನಿಧಿಗಳೊಡನೆ ಮಾತುಕತೆಗಳು ನಡೆದಿದ್ದು, ಇನ್ನೊಂದು ವಾರದಲ್ಲಿ ಅಂತಿಮ ನಿರ್ಧಾರವನ್ನು ಟಾಟಾ ಕಂಪನಿ ಕೈಗೊಳ್ಳುವ ಸಾಧ್ಯತೆಯಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications