ಠಾಕ್ರೆ ವಿರುದ್ಧದ ಮಾನನಷ್ಟ ಮೊಕದ್ದಮೆ ವಾಪಾಸ್
ಮುಂಬೈ, ಅ. 3 : ಏಕಲವ್ಯ ತನ್ನ ಗುರುವಿಗಾಗಿ ಹೆಬ್ಬೆರಳನ್ನೇ ತುಂಡರಿಸಿ ಗುರು ದ್ರೋಣಚಾರ್ಯರಿಗೆ ಅರ್ಪಿಸಿದ ಇತಿಹಾಸವನ್ನು ನಾವು ಬಲ್ಲೇವು. ತನ್ನ ರಾಜಕೀಯ ಬೆಳವಣಿಗೆಗೆ ಕಾರಣರಾದ ಗುರುವಿನ (ಬಾಳಾ ಠಾಕ್ರೆ) ಮನವಿಗೆ ಸ್ಪಂದಿಸಿದ ಶಿಷ್ಯ (ಮಹಾರಾಷ್ಟ್ರ ಲೋಕೋಪಯೋಗಿ ಸಚಿವ-ಛಗನ್ ಭುಜಬಲ) ಅವರ ಮೇಲೆ ಹಾಕಿದ್ದ ಮಾನನಷ್ಟ ಮೊಕದ್ದಮೆಯನ್ನು ಹಿಂತೆದುಕೊಂಡಿದ್ದಾರೆ.
ಮಹಾರಾಷ್ಟ್ರದ ರಮಾಬಾಯಿ ಅಂಬೇಡ್ಕರ್ ನಗರದಲ್ಲಿ ಅಂಬೇಡ್ಕರ್ ಪ್ರತಿಮೆ ಭಗ್ನಗೊಳಿಸಲು ಛಗನ್ ಬುಜಬಲ ಕಾರಣ ಎಂದು ತಮ್ಮ ಪಕ್ಷದ ಮುಖವಾಣಿ 'ಸಾಮ್ನಾ' ದ ಸಂಪಾದಕೀಯದಲ್ಲಿ ಶಿವಸೇನೆ ನಾಯಕ ಬಾಳಾಠಾಕ್ರೆ ಅವರು ಬರೆದುಕೊಂಡಿದ್ದರು. ಇದರಿಂದ ತೀವ್ರ ಆಕ್ರೋಶಪಡಿಸಿದ್ದ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 10 ಮಂದಿ ಮೃತಪಟ್ಟು, ಅನೇಕ ಜನರು ಗಾಯಗೊಂಡಿರುವ ಘಟನೆ ಜರುಗಿತ್ತು. ಇದರಿಂದ ಕುಪಿತರಾಗಿದ್ದ ಭುಜಬಲ ಗುರುವಿನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಕಾನೂನು ಸಮರ ಸಾರಿದ್ದರು.
ಇತ್ತೀಚೆಗೆ ಬಾಳಾ ಠಾಕ್ರೆ ಅವರ ಆರೋಗ್ಯ ಹದಗೆಡುತ್ತಿದ್ದು, ಅದ್ದರಿಂದ ಅವರ ಹಾಕಿರುವ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಶಿವಸೇನೆಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ ರಾವತ್ ಹಾಗೂ ಸುಭಾಷ್ ದೇಸಾಯಿ ಅವರ ಒತ್ತಾಯದ ಮೇರೆಗೆ ಇಂದು ಬಾಳಾಠಾಕ್ರೆ ಪುತ್ರ ಉದ್ಧವ್ ಠಾಕ್ರೆ ಸಮ್ಮುಖದಲ್ಲಿ ಬಾಂದ್ರಾದ ಮೆಟ್ರೋಪಾಲಿಟನ್ ನ್ಯಾಯಾಲಯಕ್ಕೆ ತೆರಳಿ ಪ್ರಕರಣವನ್ನು ಭುಜಬಲ ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಶಿವಸೇನೆ ಪಕ್ಷದಿಂದಲೇ ರಾಜಕೀಯ ಜೀವನ ಆರಂಭಿಸಿದ ಛಗನ್ ಭುಜಬಲ ಅಲ್ಲಿಂದಲೇ ಪ್ರವರ್ಧಮಾನಕ್ಕೆ ಬಂದರು, ಆದರೆ 1991 ರಲ್ಲಿ ಬಾಳಾಠಾಕ್ರೆ ನಡುವೆ ಮೈಮನಸ್ಸು ಉಂಟಾಗಿ ಶಿವಸೇನೆ ತೊರೆದು ಕಾಂಗ್ರೆಸ್ ಸೇರಿಕೊಂಡರು. ನಂತರ ಶರದ್ ಪವಾರ್ ಎನ್ ಸಿಪಿ ಪಕ್ಷವನ್ನು ಸೇರಿಕೊಂಡರು. ಸದ್ಯ ಅವರು ಮಹಾರಾಷ್ಟ್ರದ ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications