250 ವೈದ್ಯವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿ
ಬೆಂಗಳೂರು, ಅ.2: ಮಣಿಪಾಲ್ ಹಾಗೂ ಮಂಗಳೂರಿನಲ್ಲಿರುವ ಕಸ್ತೂರಬಾ ಮೆಡಿಕಲ್ ಕಾಲೇಜಿನ 250 ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಮಣಿಪಾಲ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿರುವ ಈ ಎರಡು ವೈದ್ಯಕೀಯ ಕಾಲೇಜುಗಳಿಗೆ 2008-08ರ ಸಾಲಿನಲ್ಲಿ 250 ಮಂದಿಗೆ ಮಾತ್ರ ಪ್ರವೇಶ ನೀಡಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಆದರೆ ಈಗಾಗಲೇ ಈ ಎರಡು ಕಾಲೇಜುಗಳಲ್ಲಿ 500 ಮಂದಿಗೆ ಪ್ರವೇಶ ನೀಡಲಾಗಿದೆ.
ಸೆ.30ರೊಳಗೆ 250 ವಿದ್ಯಾರ್ಥಿಗಳನ್ನು ವರ್ಗಾಯಿಸುವಂತೆ ಆರೋಗ್ಯ ಸಚಿವಾಲಯ ಸೆ.29ರಂದು ಗಡುವು ನೀಡಿತ್ತು. ಆದರೆ ಈ ಎರಡು ಕಾಲೇಜುಗಳು ಜೂ.18, 2008ರ ವೇಳೆಗೆ 500 ಮಂದಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದವು.ವೈದ್ಯಕೀಯ ಸೀಟುಗಳಿಗೆ ಪ್ರವೇಶ ನೀಡಲು ಕಸ್ತೂರಬಾ ಮೆಡಿಕಲ್ ಕಾಲೇಜಿನ ಮಾನ್ಯತೆಯನ್ನು 2013ರವರೆಗೂ ಆರೋಗ್ಯ ಸಚಿವಾಲಯ ವಿಸ್ತರಿಸಿತ್ತು. ಆರೋಗ್ಯ ಸಚಿವಾಲಯದ ನಿಯಮಗಳನ್ನು ಮೀರಿ 500 ಮಂದಿಗೆ ಪ್ರವೇಶ ನೀಡಲಾಗಿತ್ತು. ಆರೋಗ್ಯ ಸಚಿವಾಲಯದ ನಿಯಮಗಳನ್ನು ಕಸ್ತೂರಬಾ ಮೆಡಿಕಲ್ ಕಾಲೇಜು ಪಾಲಿಸಲೇಬೇಕಾದ ಕಾರಣ ವಿಧಿಯಿಲ್ಲದೆ 250 ವಿದ್ಯಾರ್ಥಿಗಳಿಗೆ ಗೇಟ್ ಪಾಸ್ ನೀಡಬೇಕಾದ ಪರಿಸ್ಥಿತಿ ತಲೆದೋರಿದೆ.
ರಾಜ್ಯ ಸರ್ಕಾರ ಹಾಗೂ ಭಾರತೀಯ ವೈದ್ಯಕೀಯ ಸಮಿತಿ(ಎಂಸಿಐ) ಹಲವಾರು ತನಿಖೆಗಳನ್ನು ಕೈಗೊಂಡು ಈ ಆದೇಶವನ್ನು ನೀಡಿವೆ. ''ನಿಯಂತ್ರಣ ಪ್ರಾಧಿಕಾರ(ಎಂಸಿಐ) ನಮ್ಮನ್ನು ದಾರಿ ತಪ್ಪ್ಪಿಸಿತು. ಇದೊಂದು ಅರ್ಥವಿಲ್ಲದ ಕ್ರಮ'' ಎಂದು ಮಣಿಪಾಲ್ ವಿಶ್ವವಿದ್ಯಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಸುದರ್ಶನ್ ಪ್ರತಿಕ್ರಿಯಿಸಿದ್ದಾರೆ. 1998ರಿಂದಲೂ ಕಸ್ತೂರಬಾ ಮೆಡಿಕಲ್ ಕಾಲೇಜುಗಳಲ್ಲಿ 500 ಮಂದಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ಸಿಇಟಿ ಭಾಗವಾಗಿ ಸರ್ಕಾರಿ ಕೋಟಾದಡಿ 92 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿತ್ತು ಎಂದರು. ''ಆರೋಗ್ಯ ಸಚಿವಾಲಯದೊಂದಿಗೆ ಮಾತುಕತೆ ಮುಂದುವರಿಸಿದ್ದೇವೆ. ಯಾವುದೇ ವಿದ್ಯಾರ್ಥಿಗಳಿಗೂ ಗೇಟ್ ಪಾಸ್ ಕೊಡುವುದಿಲ್ಲ'' ಎಂದು ಮಣಿಪಾಲ್ ವಿಶ್ವ್ವವಿದ್ಯಾಲಯದ ಉಪ ಕುಲಪತಿ ಡಾ. ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.
(ಏಜೆನ್ಸೀಸ್)