ಸಿವಿಎಸ್ ಪದ್ಧತಿ ರದ್ದು, ಎಸ್ಎಸ್ ಮತ್ತೆ ಜಾರಿ
ಬೆಂಗಳೂರು, ಅ. 1 : ಅನೇಕ ಸಮಸ್ಯೆಗಳನ್ನು ಹುಟ್ಟುಹಾಕಿದ್ದ ಮೌಲ್ಯಾಧಾರಿತ ತೆರಿಗೆ ಆಸ್ತಿ (ಸಿವಿಎಸ್) ಪದ್ಧತಿಯನ್ನು ರದ್ದುಪಡಿಸಲಾಗಿದ್ದು, ಸ್ವಯಂ ಘೋಷಿತ ಆಸ್ತಿ ತೆರಿಗೆ( ಎಸ್ಎಸ್) ಪದ್ಧತಿಯ ಸಾಧಕ ಬಾಧಕಗಳನ್ನು ಚರ್ಚಿಸಿ 15 ದಿನದೊಳಗೆ ಪರಿಷ್ಕರಿಸಿ ನೂತನವಾಗಿ ಜಾರಿಗೆ ತರವಾಗುವುದು ಎಂದು ಸಾರಿಗೆ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಆರ್. ಅಶೋಕ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮೌಲ್ಯಾಧಾರಿತ ಅಸ್ತಿ ತೆರಿಗೆ ಪದ್ಧತಿಗೆ ಭಾರಿ ಪ್ರತಿಭಟನೆ ವ್ಯಕ್ತವಾಗಿದ್ದರಿಂದ ಚರ್ಚೆಯ ನಂತರ ಈ ಕ್ರಮಕೈಗೊಳ್ಳಲಾಗಿದೆ ಎಂದರು. ಕಳೆದ ನಾಲ್ಕು ವರ್ಷಗಳಿಂದ ತೆರಿಗೆ ವಿಷಯ ಅನೇಕ ಗೊಂದಲಗಳು ಸೃಷ್ಟಿಯಾಗಿದ್ದವು. ಮೌಲ್ಯಾಧಾರಿತ ತೆರಿಗೆ ಜನಸಾಮಾನ್ಯರಿಗೆ ಭಾರಿ ಹೊರೆಯಾಗುವುದನ್ನು ಅರಿತಿರುವ ಸರ್ಕಾರ, ಮೊದಲಿದ್ದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ಪರಿಷ್ಕರಿಸಿ ಮರು ಜಾರಿಗೆ ತರಲು ನಿರ್ಧರಿಸಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಸಾಧಕ ಬಾಧಕಗಳನ್ನು ಅವಲೋಕಿಸಿ 15 ದಿನದೊಳಗೆ ಪರಿಷ್ಕತ ಸ್ವಯಂ ಘೋಷಿತ ತೆರಿಗೆ ಆಸ್ತಿ ಪದ್ಧತಿ ಅಧಿಕೃತವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಉಪಸಮಿತಿಯ ನೇತೃತ್ವದ ವಹಿಸಿರುವ ಸಚಿವ ಅಶೋಕ್ ವಿವರಿಸಿದರು. ಸ್ವಯಂ ಘೋಷಿತ ಅಸ್ತಿ ತೆರಿಗೆ ಜಾರಿಗೆ ತರುವುದರಿಂದ ಸುಮಾರು 15 ಲಕ್ಷ ಆಸ್ತಿಗಳು ಇದರ ವ್ಯಾಪ್ತಿಗೆ ಬರಲಿವೆ ಎಂದು ಹೇಳಿದರು. ಈ ಮೂಲಕ ಅನೇಕ ದಿನಗಳಿಂದ ಸಮಸ್ಯೆಯಾಗಿದ್ದ ಆಸ್ತಿ ತೆರಿಗೆ ಪದ್ಧತಿಗೆ ಸರ್ಕಾರ ತೆರೆ ಎಳೆದಂತಾಗಿದೆ. ಅಕ್ರಮ ಸಕ್ರಮಗಳ ಗೊಂದಲವನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು ಎಂದು ಅಶೋಕ್ ತಿಳಿಸಿದರು.
ನ್ಯಾಯಾಲಯಕ್ಕೆ ಶೀಘ್ರ ವಿವರ
ನ್ಯಾಯಾಲಯ ನೀಡಿದ್ದ ಮೂರು ತಿಂಗಳ ಗಡುವಿನಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿರುವ ಪ್ರತಿಕ್ರಿಯಿಸಿದ ಅವರು, ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿ ಶೀಘ್ರದಲ್ಲಿ ನ್ಯಾಯಾಲಯಕ್ಕೆ ವಿವರವನ್ನು ಸಲ್ಲಿಸಲಾಗುವುದು ಎಂದು ಹೇಳಿದರು. ಕ್ಷೇತ್ರ ಪುನರ್ ವಿಂಗಡಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾರ್ಡ್ ಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆದಿದೆ. ಹಿಂದೆ ಮಾಡಲಾಗಿದ್ದ ಮತದಾರರ ಪಟ್ಟಿಯಲ್ಲಿ ಅನೇಕ ನೂನ್ಯತೆಗಳಿದ್ದರಿಂದ ಸಮಸ್ಯೆಗಳನ್ನು ಎದುರಿಸಲಾಗಿದೆ. ಈ ಎಲ್ಲ ಕೆಲಸಗಳು ಬಾಕಿ ಇದ್ದರಿಂದ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಅಶೋಕ ಹೇಳಿದರು.
ಮೇಯರ್ ನೇರ ಆಯ್ಕೆ
ಪ್ರತಿ ವರ್ಷಕ್ಕೆ ಒಬ್ಬರಂತೆ ಮೇಯರ್ ಗಳನ್ನು ಬದಲಾಯಿಸಿದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಮೇಯರ್ ಅವಧಿಯನ್ನು ಎರಡೂವರೆ ವರ್ಷದಿಂದ 5 ವರ್ಷದ ವರೆಗೆ ಏರಿಸಲು ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ಅಶೋಕ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)