ಸರಣಿಸ್ಫೋಟದ ರುವಾರಿ ಸಿಮಿ ಉಗ್ರ ಸೆರೆ
ಬೆಂಗಳೂರು, ಸೆ. 29 : ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಿಷೇಧಿತ ಸಿಮಿ ಸಂಘಟನೆಯ ಶಂಕಿತ ಉಗ್ರನೊಬ್ಬನನ್ನು ನಗರದ ವಿಶೇಷ ಪೊಲೀಸ್ ತಂಡ ಬಂಧಿಸಿದ್ದಾರೆ. ಬೆಂಗಳೂರಿನ ನಂತರ ಮಂಗಳೂರು, ಗೋವಾದಲ್ಲೂ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು ಎಂದು ಪೊಲೀಸ್ ಆಯುಕ್ತ ಗೋಪಾಲ್ ಬಿ. ಹೊಸರ್ ಅವರು ಹೇಳಿದ್ದಾರೆ.
ವಿಜಾಪುರ ಜಿಲ್ಲೆಯ ಇಂಜಿನಿಯರಿಂಗ್ ವಿದ್ಯಾರ್ಥಿ ಮಹ್ಮದ್ ಸಮಿ ಬಾಗೇವಾಡಿ ಅಲಿಯಾಸ್ ಅಬ್ದುಲ್ ಸಮಿ(25) ಎಂಬುವನನ್ನು ಬಂಧಿಸಿದ್ದಾರೆ. ಆತನಿಂದ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಮುಖ ದಾಖಲೆ, ಸಿಡಿ, ಕಂಪ್ಯೂಟರ್, ಜಿಹಾದಿ ಪುಸ್ತಕಗಳು ಹಾಗೂ ಪಲ್ಸರ್ ಬೈಕ್ ಒಂದನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳೀಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಆರೋಪಿ ಸಮಿಯನ್ನು ಒಂದನೇ ಎಂಎಂ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ಸಫ್ದರ್ ಹುಸೇನ್ ನಾಗೋರಿ, ಹಫೀಜ್ ಹುಸೇನ್ ಅಲಿಯಾಸ್ ಅದ್ನಾನ್, ಶಿಬ್ಲಿ, ತೌಖಿರ್ ,ಶಹಬಾಜ್ ಹಾಗೂ ಅಬು ಬಷೀರ್ ಮತ್ತಿತರ ಸಿಮಿ ಮುಖಂಡರ ಸಹಚರನಾಗಿ ಸಮಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಹುಬ್ಬಳ್ಳಿಯ ಕ್ಯಾಸಲ್ ರಾಕ್, ಕೇರಳಾದ ವಗಾಮೋನ್ ಸೇರಿದಂತೆ ಸಿಮಿ ಸಂಘಟನೆ ಶಿಬಿರಗಳಲ್ಲಿ ಪಾಲ್ಗೊಂಡಿದ್ದ. ಈತನ ಮೂಲ ವಿಜಾಪುರದ ಚನ್ನಕೇಶವನಗರ. ಈತನ ತಂಡೆ ಅಹ್ಮದ್ ಬಾಗೇವಾಡಿ.
ಸರಣಿ ಸ್ಫೋಟದ ಬಗ್ಗೆ ಮಾಹಿತಿ
ನಗರದ ಮಡಿವಾಳದ ಬಳಿ ನಡೆದ ಮೊದಲ ಸ್ಫೋಟದ ಬಗ್ಗೆ ಕೆಲವು ಪ್ರಮುಖ ಮಾಹಿತಿಗಳನ್ನು ಸಮಿ ನೀಡಿದ್ದಾನೆ. ಸರಣಿ ಸ್ಫೋಟವನ್ನು ಎರಡು ತಂಡಗಳು ರೂಪಿಸಿದ್ದು, ಒಂದೇ ದಿನದಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ. ಸೆ. 25 ರಂದೇ ಪೊಲೀಸ್ ಬಲೆ ಸಿಕ್ಕಿ ಬಿದ್ದ ಶಂಕಿತ ಉಗ್ರನನ್ನು ಇನ್ನೂ 14 ದಿನಗಳ ಕಾಲ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
(ದಟ್ಸ್ ಕನ್ನಡ ವಾರ್ತೆ)
ಧಾರವಾಡದ ಬಳಿ ಸಜೀವ ಬಾಂಬ್ ಪತ್ತೆ
ತಮಿಳುನಾಡಿನ ದೇವಾಲಯ ಸ್ಫೋಟಿಸಲು ಉಗ್ರರ ಸಂಚು
ದಿಲ್ಲಿ ಸ್ಫೋಟ : ಮಣಿಪಾಲ್ ನಲ್ಲಿ 3 ಜನ ಸೆರೆ












Click it and Unblock the Notifications