ಬಳ್ಳಾರಿ: ದಿವಾಕರಬಾಬು ಬಂಧನ, ಬಿಡುಗಡೆ
ಬಳ್ಳಾರಿ, ಸೆ. 28 : ವಿವಾದಿತ ತುಮಟಿ ಗಣಿ ಪ್ರದೇಶಕ್ಕೆ ನಿಷೇಧಾಜ್ಞೆ ಉಲ್ಲಂಘಿಸಿ ಭೇಟಿ ನೀಡಿದ್ದ ಮಾಜಿ ಸಚಿವ ಎಂ. ದಿವಾಕರ್ ಬಾಬು, ಟಿಎನ್ಆರ್ ಮೈನ್ಸ್ ನ ಟಪಾಲು ಗಣೇಶ್ ಹಾಗೂ ಜನತಾ ಬಜಾರ್ ಮಾಜಿ ಅಧ್ಯಕ್ಷ ಜಯಂಗೋಪಿನಾಥ್ ಸೇರಿದಂತೆ ಐವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವ ಘಟನೆ ಭಾನುವಾರ ನಡೆದಿದೆ.
ಭಾನುವಾರ ಬೆಳಗ್ಗೆ ಜಿಲ್ಲೆಯ ತೊರಣಗಲ್ಲು ಪೊಲೀಸ್ ಠಾಣೆಯ ವ್ಯಾಪ್ತಿ ಕರ್ನಾಟಕ ಆಂಧ್ರ ಪ್ರದೇಶದಲ್ಲಿರುವ ವಿವಾದಿತ ತುಮಟಿ ಗಣಿ ಪ್ರದೇಶಕ್ಕೆ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ದಿವಾಕರ್ ಬಾಬು ಭೇಟಿ ನೀಡಿದ ಸಂದರ್ಭದಲ್ಲಿ ಬಂಧಿಸಲಾಗಿದೆ. ಸದರಿ ಗಣಿ ಪ್ರದೇಶದಲ್ಲಿ ವಿವಾದಕ್ಕೆ ಒಳಗಾಗಿರುವ ಗಡಿಯಲ್ಲಿನ ಟಿಎನ್ಆರ್ ಕಂಪನಿಯವರು ಗಣಿಗಾರಿಕೆ ನಡೆಸಬಾರದು ಎಂದು ಗಣಿ ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದರು. ಸದರಿ ಗಡಿ ಪ್ರದೇಶದಲ್ಲಿ ಅಲ್ಲಿ 144 ಕಲಂ ಅನ್ವಯ ನಿಷೇಧಾಜ್ಞೆ ವಿಧಿಸಿರುವುದರಿಂದ ಅಲ್ಲಿಗೆ ಹೋಗದಂತೆ ಪೊಲೀಸರು ತಡೆಯೊಡ್ಡಿದಾಗ ದಿವಾಕರ್ ಬಾಬು ವಾಗ್ವಾದಕ್ಕೆ ಇಳಿದರು.
ತುಮಟಿ ಗ್ರಾಮ ಬಳಿಯಲ್ಲಿನ ಗಣಿ ಪ್ರದೇಶದಲ್ಲಿ ಟಿಎನ್ಆರ್, ಎಂಬಿಟಿ ಹಾಗೂ ಎನ್ಆರ್ ಮೈನ್ಸ್ ಗಳ ಗಡಿರೇಖೆಯನ್ನು ಗುರುತಿಸುವ ಕುರಿತಂತೆ ಅಳತೆ ಕಾರ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎನ್ನಲಾದ ಕಾರಣಕ್ಕಾಗಿ ಸಂಡೂರು ತಾಲ್ಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಸೆಫ್ಟಂಬರ್ 9 ರಿಂದ ಅನ್ವಯವಾಗುವಂತೆ ಸದರಿ ಗಣಿ ಪ್ರದೇಶದ ಸುತ್ತಮುತ್ತ ಗಲಾಟೆಯಾಗದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಘಟನೆ ಹಿನ್ನೆಲೆ
ತಾವು ತುಮಟಿ ಗ್ರಾಮದ ಬಳಿಯಲ್ಲಿನ ಸದರಿ ಗಣಿ ಪ್ರದೇಶದಲ್ಲಿ 1969 ರಿಂದಲೂ ಗಣಿಗಾರಿಕೆ ನಡೆಸುತ್ತಿರುವುದಾಗಿ, ಆದರೆ ಇತ್ತೀಚೆಗೆ ಸಚಿವ ಜನಾರ್ದನರೆಡ್ಡಿ ಮಾಲೀಕತ್ವದ ನೆರೆಯ ಆಂಧ್ರಪ್ರದೇಶದ ಓಬಳಾಪುರಂ ಮೈನಿಂಗ್ ಸಂಸ್ಥೆಯವರು ತಮ್ಮ ಪ್ರದೇಶದಲ್ಲಿ ಅತಿಕ್ರಮಣ, ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಟಿಎನ್ಆರ್ ಸಂಸ್ಥೆಯವರು ದೂರಿದ್ದಾರೆ. ಮಾಜಿ ಸಚಿವ ಎಂ.ದಿವಾಕರ್ ಬಾಬು ಅವರು ಈ ಬಗ್ಗೆ ಟಪಾಲ್ ಗಣೇಶ್ ಅವರ ಟಿಎನ್ಆರ್ ಸಂಸ್ಥೆಗೆ ಬೆಂಬಲ ವ್ಯಕ್ತಪಡಿಸಿ ಕರ್ನಾಟಕ ಗಡಿ ನೆಲವನ್ನು ಅದರಲ್ಲಿಯೂ ಗಣಿ ಪ್ರದೇಶದ ಗಡಿಯನ್ನು ಅಂಧ್ರದ ಕಂಪನಿಯವರು ಅತಿಕ್ರಮಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಅಧಿಕಾರಿಗಳ ಈ ವರ್ತನೆಯನ್ನು ಆಕ್ಷೇಪಿಸಿ ಟಿಎನ್ಆರ್ ಸಂಸ್ಥೆಯವರು ಧಾರವಾಡದ ಹೈಕೋರ್ಟ್ ಪೀಠಕ್ಕೆ ಮೊರೆ ಹೋಗಿದ್ದರಿಂದಾಗಿ, ಸೆ. 25 ರಂದು ಗೌರವಾನ್ವಿತ ನ್ಯಾಯಾಧೀಶರು ಆದೇಶ ಹೊರಡಿಸಿ, ಸದರಿ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಬಹುದು annexure-3 ಪ್ರಕಾರ ಆ ಸಂಸ್ಥೆಗೆ ಗುತ್ತಿಗೆ ನೀಡಿದ ಮೈನಿಂಗ್ ಪ್ರದೇಶದಲ್ಲಿ ಗಣಿಗಾರಿಕೆ ಮುಂದುವರೆಸಲು ತಿಳಿಸಿದ್ದರಿಂದ ಈ ಆದೇಶದೊಂದಿಗೆ ಟಪಾಲ್ ಗಣೇಶ್, ಎಂ. ದಿವಾಕರ್ ಬಾಬು ಅವರು ಇಂದು ಟಿಎನ್ಆರ್ ಗಣಿ ಪ್ರದೇಶಕ್ಕೆ ತೆರಳಿದ್ದಾಗ, ಪೊಲೀಸರು ಅವರನ್ನು ಬಂಧಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)