ಬಿಜೆಪಿ ಸರ್ಕಾರ ವಜಾಕ್ಕೆ ದೇವೇಗೌಡರ ಒತ್ತಾಯ
ಬೆಂಗಳೂರು, ಸೆ. 21 : ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ವಜಾಗೊಳಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲಿ ಪತ್ರ ಬರೆಯುವುದಾಗಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ನಗರದಲ್ಲಿ ದಾಳಿಗೊಳಗಾದ ಚರ್ಚ್ ಗಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಜರಂಗದಳ ಸಂಘಟನೆಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಗುಜರಾತ್ ಮಾದರಿ ಆಡಳಿತವನ್ನು ಜಾರಿತಂದಿದ್ದಾರೆ. ಇದರ ಪರಿಣಾಮವಾಗಿ ಇಂದು ಅಲ್ಪಸಂಖ್ಯಾತರು ಭಯದ ನೆರಳಲ್ಲಿ ಜೀವಿಸುತ್ತಿದ್ದಾರೆ. ಕ್ರೈಸ್ತ ಧರ್ಮೀಯರ ಪವಿತ್ರ ಸ್ಥಳಗಳು ಸರ್ಕಾರಿ ಪ್ರಾಯೋಜಿತ ಕಿಡಿಗೇಡಿಗಳಿಂದ ದಾಳಿಗೊಳಗಾಗತೊಡಗಿವೆ ಎಂದು ಕಿಡಿಕಾರಿದರು. ಚರ್ಚ್ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳನ್ನು ಕೋಕಾ ಕಾಯ್ದೆಯಡಿ ಬಂಧಿಸುವಂತೆ ಅವರು ಕೇಂದ್ರವನ್ನು ಒತ್ತಾಯಿಸಿದರು.
ಮಂಗಳೂರು ಗಲಭೆಯನ್ನು ನಿವೃತ್ತ ನ್ಯಾಯಾಧೀಶರೊಬ್ಬರಿಂದ ನ್ಯಾಯಾಂಗ ತನಿಖೆ ನಡೆಸುವುದಾಗಿ ಸರ್ಕಾರ ಹೇಳಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸದ್ಯ ಸೇವೆಯಲ್ಲಿರುವ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು. ಇತಿಹಾಸ ಅತ್ಯಂತ ಕೆಟ್ಟ ಸರ್ಕಾರ ಇದಾಗಿದ್ದು, ರಾಜ್ಯದಲ್ಲಿ ಅರಾಜಕತೆ ನಿರ್ಮಾಣವಾಗುವ ಮುಂಚೆ ಬಿಜೆಪಿ ಸರ್ಕಾರವನ್ನು ವಜಾಗೊಳಿಸುವಂತೆ ಶೀಘ್ರದಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನು ಬರೆಯುವುದಾಗಿ ದೇವೇಗೌಡರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಚರ್ಚ್ ಮೇಲೆ ದಾಳಿ : ಪೊಲೀಸರ ಬೆವರಿಳಿಸಿದ ಸಿಎಂ
ಕಾಣದ ಕೈಗಳ ವ್ಯವಸ್ಥಿತ ಸಂಚು : ಯಡಿಯೂರಪ್ಪ ಆರೋಪ
ಚರ್ಚ್ ಮೇಲೆ ದಾಳಿ, ಈಗ ಬೆಂಗಳೂರು ಸರದಿ
ಚರ್ಚ್ ದಾಳಿಗೆ ಜ್ಞಾನಪೀಠ ಸಾಹಿತಿಗಳ ಖಂಡನೆ












Click it and Unblock the Notifications