ದಿಲ್ಲಿ ಸ್ಫೋಟಕ್ಕೆ ಕರ್ನಾಟಕದ ಸ್ಫೋಟಕಗಳು
ನವದೆಹಲಿ, ಸೆ. 21 : ಕಳೆದ ಶುಕ್ರವಾರ ರಾಜಧಾನಿಯ ಜಾಮಿಯಾ ನಗರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಬಂಧಿತರಾಗಿರುವ ಇಬ್ಬರು ಉಗ್ರರಾದ ಮೂಹ್ಮದ್ ಸೈಫ್ ಹಾಗೂ ಜೀಶಾನ್ ದೇಶದ ವಿವಿಧೆಡೆ ನಡೆದ ಸರಣಿ ಸ್ಫೋಟಗಳಲ್ಲಿ ತಮ್ಮ ಪಾತ್ರ ಇರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.
ಮೊಹ್ಮದ್ ಸೈಫ್ ಎಂಬ ಉಗ್ರ ಶುಕ್ರವಾರ ನಡೆದ ಗಂಡಿನ ಕಾಳಗದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಹಾಗೂ ಜೀಶಾನ್ ನನ್ನು ಗುರುವಾರ ರಾತ್ರಿ ಟಿವಿ ವಾಹಿನಿಯೂಂದಕ್ಕೆ ಸಂದರ್ಶನ ನೀಡಲು ತೆರಳಿದ್ದ ಸಂದರ್ಭದಲ್ಲಿ ಬಂಧಿಸಲಾಗಿತ್ತು. ಇಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿ ನ್ಯಾಯಾಲಯ ಶನಿವಾರ 14 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದೆ.
ಈ ಎಲ್ಲಾ ವಿಧ್ವಂಸಕ ಕೃತ್ಯಗಳ ಹಿಂದಿರುವ ಸಿಮಿ ಹಾಗೂ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗಳ ನಡುವೆ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯಾದ ಲಷ್ಕರ್-ಇ-ತೊಯ್ಬಾ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ.
ಕರ್ನಾಟಕದಿಂದ ಸ್ಫೋಟಕ ಪೂರೈಕೆ
ದೆಹಲಿಯಲ್ಲಿ ಬಳಸಿದ ಸ್ಫೋಟಕ ಸಾಮಗ್ರಿಗಳು ಕರ್ನಾಟಕದಿಂದ ಸರಬರಾಜಾಗಿರುವುದು ತನಿಖೆಯಿಂದ ಪತ್ತೆಯಾಗಿದೆ. ಎನ್ ಕೌಂಟರ್ ಸಂದರ್ಭದಲ್ಲಿ ಮೃತನಾದ ಅತಿಫ್ ಅಲಿಯಾಸ್ ಬಷರ್ ಸ್ಫೋಟಗಳ ಪ್ರಮುಖ ರೂವಾರಿಯಾಗಿದ್ದಾನೆ. ಈತ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಆಲ್ ಖೈದಾದ ನಾಯಕ ಒಸಮಾ ಬಿನ್ ಲಾಡೆನ್ ನಿಂದ ಪ್ರೇರಿತವಾಗಿರುವುದು ಘಟನಾ ಸ್ಥಳದಲ್ಲಿ ಲ್ಯಾಪ್ ಟಾಪ್ ನಲ್ಲಿ ಅಡಕವಾಗಿರುವ ಸಾಹಿತ್ಯ ಹಾಗೂ ಲಾಡೆನ್ ಭಾವಚಿತ್ರದಿಂದ ದೃಢಪಟ್ಟಿದೆ. ಸೆ. 13ರ ದೆಹಲಿ ದಾಳಿಯನ್ನು ರೂಪಿಸಿದ್ದ ಅಬ್ದುಲ್ ಸುಭಾನ್ ಖುರೇಶಿ ಅಲಿಯಾಸ್ ತೌಕೀರ್ ನ ಚಿತ್ರ ಸಹ ಇದ್ದ ಲ್ಯಾಪ್ ಟಾಪ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ದೆಹಲಿ ವಿಶೇಷ ಪೊಲೀಸ್ ಘಟಕದ ಜಂಟಿ ಆಯುಕ್ತ ಕರ್ನೈಲ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications