ನ್ಯಾನೋ ಘಟಕಕ್ಕೆ ರತ್ನಗಂಬಳಿಯ ಆಹ್ವಾನ
ಬೆಂಗಳೂರು, ಸೆ. 18 : ಟಾಟಾ ನ್ಯಾನೋ ಕಾರು ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರ ರತ್ನಗಂಬಳಿ ಹಾಸುವ ಮೂಲಕ ಆಹ್ವಾನ ನೀಡಿದೆ. ಧಾರವಾಡದಲ್ಲಿ ನ್ಯಾನೋ ಕಾರು ಉತ್ಪಾದನಾ ಘಟಕ ಸ್ಥಾಪಿಸಲು ಒಲವು ತೋರಿರುವ ಬೆನ್ನಲ್ಲೇ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಟಾಟಾ ಘಟಕ ಸ್ಥಾಪನೆಗೆ ಸರ್ವ ರೀತಿಯಲ್ಲಿ ಪ್ರೋತ್ಸಾಹ ನೀಡುವ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಟಾಟಾ ಕಂಪನಿಯ ನ್ಯಾನೋ ಕಾರು ಘಟಕದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಈಗಾಗಲೇ ಮಾತನಾಡಿದ್ದು, ಟಾಟಾ ನ್ಯಾನೋ ಕಂಪನಿ ಘಟಕ ಸ್ಥಾಪನೆಗೆ ಬೇಕಿರುವ ಅಗತ್ಯ ಮೂಲಭೂತ ಸೌಲಭ್ಯವನ್ನು ನೀಡಲು ಸರ್ಕಾರ ಸಿದ್ದವಿರುವ ಸಂಗತಿ ಈಗಾಗಲೇ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
1000 ಎಕರೆ ಭೂಮಿ, ವಿದ್ಯುತ್ ಸೇರಿ ಅಗತ್ಯ ಸೌಲಭ್ಯ ನೀಡಲು ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದೆ. ಟಾಟಾ ಘಟಕ ಸ್ಥಾಪನೆಯಿಂದ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ ಎಂದು ಯಡಿಯೂರಪ್ಪ ಹೇಳಿದರು. ಪಶ್ಚಿಮ ಬಂಗಾಲದ ಸಿಂಗೂರ್ ನಲ್ಲಿರುವ ಟಾಟಾ ನ್ಯಾನೋ ಕಾರು ಘಟಕ ತೀವ್ರ ವಿವಾದ ಸುಳಿಯಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ಬೇರೆಡೆ ಕಂಪನಿ ಸ್ಪಾಪಿಸಲು ಟಾಟಾ ಟಾಟ ಕಂಪನಿಯ ಮುಖ್ಯಸ್ಥರು ಚಿಂತನೆ ನಡೆಸುತ್ತಿದ್ದಾರೆ.
ಟಾಟಾ ಕಂಪನಿಯೂ 997 ಎಕರೆ ರೈತರ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಆದರೆ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಕೇವಲ 600 ಎಕರೆ ಭೂಮಿಯನ್ನು ಮಾತ್ರ ತೆಗೆದುಕೊಳ್ಳಬೇಕು. ಹೆಚ್ಚುವರಿ ಭೂಮಿಯನ್ನು ರೈತರಿಗೆ ವಾಪಸ್ಸುಮಾಡಬೇಕು ಎನ್ನುವ ವಿಷಯವೇ ವಿವಾದಕ್ಕೆ ಮೂಲ ಕಾರಣವಾಗಿದೆ. ನ್ಯಾನೋ ಘಟಕ ಆರಂಭವಾದಾಗಿನಿಂದ ಮಮತಾ ಅವರ ಪ್ರತಿಭಟನೆ ಆರಂಭವಾಗಿದೆ. ಇದರಿಂದ ತೀವ್ರ ಅಸಮಾಧಾನಗೊಂಡಿರುವ ರತನ್ ಟಾಟಾ ಘಟಕವನ್ನು ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ಇದರ ಲಾಭ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಕರ್ನಾಟಕದಲ್ಲಿ ಕಂಪನಿ ಸ್ಥಾಪಿಸುವುದಾದರೆ ಎಲ್ಲ ರೀತಿ ಸೌಲಭ್ಯಗಳನ್ನು ಒದಗಿಸುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಧಾರವಾಡಕ್ಕೆ
ಟಾಟಾ
ಮಾರ್ಕೋಪೊಲೋ
ಬಸ್
ಇತ್ಯರ್ಥಗೊಂಡ
ಸಿಂಗೂರ್
ಭೂವಿವಾದ
ನ್ಯಾನೋ
ಕಾರು
ಘಟಕ
ಸ್ಥಾಪನೆಗೆ
ಕರ್ನಾಟಕದ
ಆಹ್ವಾನ